Sunday, September 08, 2024

'ಗಣಪತಿ ಮತ್ತು ಸಂಕಷ್ಟ ಚತುರ್ಥೀ ವ್ರತ'.

ಮನುಷ್ಯ ಸದಾ ಸಂತೋಷದಿಂದಿರಲು ಪ್ರಯತ್ನಿಸುತ್ತಾನೆ. ಅದಕ್ಕೆ ಆತ ಮಾಡದ ಕೆಲಸವಿಲ್ಲ! ಓಡದ ಸ್ಥಳವಿಲ್ಲ!  ಒಂದಿಲ್ಲೊಂದು ರೀತಿಯಲ್ಲಿ ಸಂತಸದ ಸತತಾನ್ವೇಷಿಯಾಗಿ ಸಾಗುವ ಮನುಷ್ಯ; ಕಡೆಯಲ್ಲಿ ಪಡೆಯುವುದೇನು? ಎಂಬುದು ಯಕ್ಷಪ್ರಶ್ನೆಯಾಗಿ ಜೀವಿತದ ಕೊನೆಗೆ ಕಾಡುತ್ತಿರುತ್ತದೆ. ಇದಕ್ಕೆ ಉತ್ತರವಾಗಿ ಋಷಿಗಳು ಕಂಡುಕೊಂಡಿದ್ದು, ಶುಭಸ್ಮರಣೆಯೇ ಜೀವನದುದ್ದಕ್ಕೂ ಬರುವಂತಾಗಬೇಕು. ಅದಕ್ಕೆ ದೇವನು ವೇದಿಕೆಯನ್ನುಂಟು ಮಾಡಿಕೊಡಬೇಕು… ಎಂದು ಬೇಡಿಕೊಂಡರು…  
“ ಸ ನೋ ದೇವಶ್ಶುಭಯಾ ಸ್ಮೃತ್ಯಾ ಸಂಯುನಕ್ತು “
ಈ ಸಂಯೋಗ ವೇದಿಕೆಯಲ್ಲಿ  ಜೀವ ದೇವರ ಸಂಯೋಗ ಸಾಂದರ್ಭಿಕವಾಗಿ ಏರ್ಪಡಬೇಕು... ಈ ಸಂಯೋಗಕ್ಕೆ ಅಥವಾ ಈ ಸಂತೋಷಕ್ಕೆ ಮನುಷ್ಯ ಸದಾ ಆತುರನಾಗಿದ್ದಾನೆ. ಅದಕ್ಕೆಂದೇ ಮಹಾಕವಿ ಕಾಳಿದಾಸ ’ಉತ್ಸವಪ್ರಿಯಾಃ
ಖಲು ಮನುಷ್ಯಾಃ!’ ಎಂದು ಹೇಳಿರುವುದು. ಉತ್ಸವ ಎಂದರೆ ಹಬ್ಬ ಎಂದರ್ಥ. ಈ ಹಬ್ಬ ಹರಿದಿನಗಳು ಸನಾತನಿಗಳಲ್ಲಿರುವಷ್ಟು ಮತ್ತೆ ಯಾರಲ್ಲೂ ನಾವು ಈ ಪ್ರಮಾಣದಲ್ಲಿ ಕಾಣಲಾರೆವು! ಎಂದು ಅಂದುಕೊಳ್ಳುತ್ತೇನೆ. ಅದಕ್ಕೆ ಮೂಲ ಕಾರಣ ಶುಭಸ್ಮರಣೆಗಳಿಂದ ಮನಸ್ಸನ್ನು ಉದ್ಧರಿಸಿ ಕೊಳ್ಳುವುದೇ ಆಗಿದೆ. ಅದನ್ನೇ ಡಿ. ವಿ. ಗುಂಡಪ್ಪನವರು ತಮ್ಮ ಮುಕ್ತಕವೊಂದರಲ್ಲಿ ಹೀಗೆ ಹೇಳಿದ್ದಾರೆ.

ದೇವಮಂದಿರ ಭಜನೆ ಪೂಜೆ ಪ್ರಸಾದಗಳು ಜೀವನದಲಂಕಾರ, ಮನಸಿನುದ್ಧಾರ

ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- ದಾವುದಾದೊಡಮೊಳಿತು - ಮಂಕುತಿಮ್ಮ

ಕ್ಷುಲ್ಲಕಜಗದ ತಳಹದಿಯಿಂದ ಮೇಲೆ - ಏಳುವ ಮನಸ್ಸುಳ್ಳವರಿಗೆ ದೇವ ಸೇತುವಾಗಿ ನಿಲ್ಲಿತ್ತಾನೆ. ಆ ದೇವನೇ ಗಣೇಶ ಅಥವಾ ಗಣಪತಿ. ಆತನ ಕುರಿತಾಗಿ ಬ್ರಹ್ಮವೈವರ್ತಪುರಾಣದಲ್ಲಿ

ಜ್ಞಾನಾರ್ಥವಾಚಕೋ ಗಶ್ಚ ಣಶ್ಚ ನಿರ್ವಾಣವಾಚಕಃ |

ತಯೋರೀಶಂ ಪರಂ ಬ್ರಹ್ಮ ಗಣೇಶಂ ಪ್ರಣಮಾಮ್ಯಹಮ್ || ಎಂದು ನಿರ್ವಚನ ನೀಡಿದ್ದಾರೆ. ಇವ ವೇದಕಾಲದವ ಅಲ್ಲ! ಇವ ದ್ರಾವಿಡರ ದೇವ! ಇವನಿಗೆ ಆರ್ಯಮರ್ಯಾದೆಯಿಲ್ಲ! ಇವ ಗಾಂಪರ ದೇವ! ಈ ರೀತಿ ಹಲವು ಹತ್ತು ಮಾತುಗಳಿಂದ ಸನಾತನಿಗಳಾದ ನಮ್ಮ ಮನಸ್ಸನ್ನು ಮುರಿಯುವ ಹುನ್ನಾರವೊಂದು ಬಹುಕಾಲದಿಂದ ನಡೆದುಕೊಂಡು ಬರುತ್ತಲಿದೆ. ಇವಕ್ಕೆಲ್ಲ ಸೊಪ್ಪು ಹಾಕುವುದು ಅನಗತ್ಯ! ಎಂಬುದು ನನ್ನ ಅಭಿಪ್ರಾಯ…. ಏಕೆಂದರೆ ವೇದಕಾಲ, ಉಪನಿಷತ್-ಕಾಲ ಸ್ಮೃತಿಕಾಲ, ಶಾಸ್ತ್ರಕಾಲ ಈ ರೀತಿ ವಿಭಾಗವೇ ಅವೈಜ್ಞಾನಿಕವಾಗಿದೆ. ಕಾಲವನ್ನು ಬೇಕಾದಷ್ಟು ವಿಭಾಗಿಸುವ, ವಿವೇಚಿಸುವ - ಅದರದ್ದೇ ಆದ ಸಂಜ್ಞೆಗಳಿವೆ. ಸಂವತ್ಸರ, ಮನ್ವಂತರ, ಯುಗಗಳೇ ಮೊದಲ್ಗೊಂಡು ಲವ, ತ್ರುಟಿ, ಕಲಾ, ಕಾಷ್ಠಾ ಎಂದೆಲ್ಲಾ ಕ್ಷಣ ಕ್ಷಣವನ್ನೂ ವಿಭಾಗಿಸಿ ಹೇಳಲಾಗಿದೆ. ಇದಲ್ಲದೇ  ಹಳೇಯದಾದರೆ ಶ್ರೇಷ್ಠ; ಹೊಸದು ಕನಿಷ್ಠ ಎಂಬಿತ್ಯಾದಿಯಾಗಿ ಯಾಕೆ ಈ ತರಹದ ವಿಚಾರಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ?  ಪ್ರಾಜ್ಞರಂತೂ “ಪುರಾಣಮಿತ್ಯೇವ ನ ಸಾಧು ಸರ್ವಂ” ಎಂದು ಸಾರಿ ಹೇಳಲಿಲ್ಲವೇ? ಗಣಗಳ ಅಧಿಪನಾಗಿ, ಜ್ಞಾನನಿರ್ವಾಣಕಾರಣನಾಗಿ, ಪರಬ್ರಹ್ಮನಾಗಿ ಗಣಪತಿ ಸದಾಕಾಲ, ಯಾವತ್ತೂ, ಯುಗಯುಗಗಳಿಂದಲೂ ನಮ್ಮ ದೇವರಾಗಿ ನಮ್ಮೆಲ್ಲರಿಗೆ ವಿಘ್ನನಿವಾರಕನಾಗಿ, ಅಭೀಷ್ಟಪ್ರದನಾಗಿ ನಮ್ಮ ಜೊತೆಯಲ್ಲಿಯೇ ಇದ್ದಾನೆ. ಇನ್ನೇನು? ನಮ್ಮೊಳಗೇ ಅವಿತಿದ್ದಾನೆ!

ಪಾಶ್ಚಾತ್ಯವಿಚಾರಧಾರೆಯಲ್ಲಿ ಕಾಲ ಒಂದು ಸರಳರೇಖೆಯಾಗಿ ತೋರುತ್ತದೆ. ಮಧ್ಯ ಬಿಂದುವಿನಿಂದ ಮುಂದೆ ಕ್ರಿಸ್ತಶಕ ಎಂಬುದಾಗಿಯೂ, ಅದರ ಹಿಂದೆ ಕ್ರಿಸ್ತಪೂರ್ವ ಎಂಬುದಾಗಿಯೂ ಗಣನೆಯನ್ನು ನಾವು ನೋಡುತ್ತೇವೆ. ಆದರೆ ಭಾರತೀಯ ವಿಚಾರಧಾರೆಯಲ್ಲಿ ಕಾಲ ಒಂದು ವರ್ತುಳ ಅಥವಾ ಚಕ್ರ. ಹಾಗಾಗಿ ಇಲ್ಲಿ ಯುಗಗಳೂ ಮನ್ವಂತರಗಳೂ ಆವೃತ್ತಿಯಾಗುತ್ತಿರುತ್ತವೆ.  ಅದರ ಪರಿಣಾಮವಾಗಿ ವರ್ತುಳದಲ್ಲಿ ಕಡೆ-ಮೊದಲಿಲ್ಲ! ಹಾಗಾಗಿ ನಮಗೆ ಇದು ಮೊದಲು ಇದು ಕೊನೆ ಎಂಬ ವಿಭಾಗ ರೂಢಿಯಲ್ಲಿಲ್ಲ! ವೃತ್ತವೊಂದರಲ್ಲಿ ಶೂನ್ಯಕ್ಕೂ ಪೂರ್ಣಕ್ಕೂ (೦-೩೬೦) ವ್ಯತ್ಯಾಸ ತೋರಿಸುವುದೂ ಕಷ್ಟಸಾಧ್ಯವಾಗಿದೆ. ಹಾಗಾಗಿ ಉಪನಿಷತ್ತಿನಲ್ಲಿ “ವಿಜ್ಞಾತಂ ಅವಿಜಾನತಾಂ, ಅವಿಜ್ಞಾತಂ ವಿಜಾನತಾಂ” ಎಂಬ ಅಪರೂಪದ ವಾಕ್ಯಗಳನ್ನೂ ನಾವು ಕಾಣಬಹುದು. ಇಂಥ ಮಾತುಗಳು ದಾರ್ಶನಿಕ ಪ್ರಪಂಚದಲ್ಲಿ ಸಂಚಲನವನ್ನೇ ಎಬ್ಬಿಸಿವೆ. ಹಾಗಾಗಿ ಭಾರತ ಇಂದಿಗೂ ಜ್ಞಾನದೀವಿಗೆಯಾಗಿ (ಅನ್ವರ್ಥವಾಗಿ) ರಾರಾಜಿಸುತ್ತಿದೆ.

ಧಾಯೇತ್ಸಿಂಹಗತಂ ವಿನಾಯಕಮಮುಂ ದಿಗ್ಬಾಹುಮಾದ್ಯೇ ಯುಗೇ |

ತ್ರೇತಾಯಂ ತು ಮಯೂರವಾಹನಮಮುಂ ಷಡ್ಬಾಹುಕಂ ಸಿದ್ಧಿದಮ್ ||

ದ್ವಾಪರೇ ತು ಗಜಾನನಂ ಯುಗಭುಜಂ ರಕ್ತಾಂಗರಾಗಂವಿಭುಮ್ |

ತುರ್ಯೇ ತು ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ || ಹೀಗೆ ಗಣೇಶಪುರಾಣದಲ್ಲಿಯ ಧ್ಯಾನವೊಂದನ್ನು ಪರಿಶೀಲಿಸಲಾಗಿ, ಗಣಪತಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ವಿರಾಜಮಾನನಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇಷ್ಟೇ ಅಲ್ಲ! ಸ್ಕಾಂದ ಪುರಾಣದಲ್ಲಿ ಸ್ಕಂದ-ಋಷಿಗಳ ಸಂವಾದದಲ್ಲಿ ಪಾರ್ವತಿಯೇ ಪರಶಿವನನ್ನು ಮೆಚ್ಚಿ ವಿವಾಹವಾಗುವಾಗ; ತನ್ನ ಬಯಕೆ ನೆರವೇರಲು ಗಣಪತಿಯನ್ನು ಸ್ಮರಿಸಿಕೊಂಡ ಸನ್ನಿವೇಶ ವರ್ಣಿತವಾಗಿದೆ.

ಪುರಾ ಕೃತಯುಗೇ ಪುಣ್ಯೇ ಹಿಮಾಚಲಸುತಾ ಸತೀ |

ತಪಸ್ತಪ್ತವತೀ ಭೂರಿ ನ ಲಬ್ಧಾ ಸಾ ಶಿವಂ ಪತಿಮ್ ||

ತದಾಸ್ಮರತ್ಸಾ ಹೇರಮ್ಬಂ ಗಣೇಶಂ ಪೂರ್ವಜಂ ಸುತಮ್ | … ಕಲ್ಪಾಂತರದಲ್ಲಿ ತಾಯಿಯಾಗಿದ್ದ ಪಾರ್ವತಿಗೆ ಗಣಪತಿ ಪ್ರತ್ಯಕ್ಷನಾಗಿ ಸಂಕಷ್ಟಹರಗಣಪತಿವ್ರತವನ್ನು ಬೋಧಿಸಿದ್ದು ಕಂಡುಬರುತ್ತದೆ. ಇದು ಕೃತಯುಗದ ವಿಷಯವಾಗಿದೆ. ಹಾಗಾಗಿ ಯುಗಯುಗಗಳಲ್ಲಿ ಸದಾಸರ್ವದಾ ನಮ್ಮ ಹೃದಯದಲ್ಲಿ ವಾಸವಾಗಿರುವ ಗಣೇಶ ನಮ್ಮ ಎಲ್ಲ ಸಂಕಷ್ಟಗಳನ್ನೂ ಪರಿಹರಿಸಲು ಸಮರ್ಥ!

ಯದಾ ಯದಾ ಪರಂ ವಿಪ್ರಾ ನರಃ ಪ್ರಾಪ್ನೋತಿ ಸಂಕಟಮ್ |

ತದಾ ತದಾ ಪ್ರಕರ್ತವ್ಯಂ ವ್ರತಂ ಸಂಕಷ್ಟನಾಶನಮ್ || ಕಷ್ಟಗಳು ಯಾರನ್ನು ಬಿಟ್ಟಿಲ್ಲ!? ಎಲ್ಲರೂ ಒಂದಿಲ್ಲೊಂದು ಜೀವನ ಘಟ್ಟದಲ್ಲಿ ಕಷ್ಟಕ್ಕೆ ತುತ್ತಾಗುತ್ತಾರೆ. ಈ ಕಷ್ಟವನ್ನು ಸಂಕಷ್ಟವಾಗಿಸಿಕೊಂಡು ಮನುಷ್ಯ ವಿಲಿವಿಲಿ ಒದ್ದಾಡುತ್ತಾನೆ. ಹಾಗಾದರೆ ಕಷ್ಟ ಮತ್ತು ಸಂಕಷ್ಟಗಳ ಅಂತರ ತಿಳಿಯೋಣ.

  • ಬಂದ ಕಷ್ಟ ತನಗೇ ಏಕೆ ಬಂತು?
  • ತಾನು ಇಷ್ಟು ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಿದ್ದರೂ ದೇವ ಏಕೆ ಕಷ್ಟ ಕೊಟ್ಟ?
  • ಈ ಕಷ್ಟ ಯಾವಾಗ ದೂರಾಗುತ್ತದೆ?
  • ಇದು ಇನ್ನೊಬ್ಬರಿಗೆ ಯಾಕೆ ಬರಲಿಲ್ಲ (ಬರುವುದಿಲ್ಲ)?
  • ಇದರಲ್ಲೇ ದಿನವೂ ಸೊರಗಿ ಬದುಕುವುದಕ್ಕಿಂತ ಸಾಯುವುದು ಲೇಸು!
  • ಕಷ್ಟದ ಪಾತಳಿಯಿಂದ ಮನಸ್ಸನ್ನು ಬೇರೆಡೆಗೆ ವರ್ಗಾಯಿಸಲು ಹತ್ತಿರದವರು ಎಷ್ಟೇ ಪ್ರಯತ್ನಿಸಿದರೂ; ತನ್ನ ಭಾಗ್ಯವೇ ಇಷ್ಟು! ಎಂದು ಆ ಕಡೆ ಮುಖಮಾಡದೇ ನೊಂದುಕೊಂಡು, ಮರುಗುತ್ತಾ ಹತ್ತಿರದವರನ್ನೂ ನೋಯಿಸಿ, ಬದುಕುವುದು...
  • ಪಕ್ಕದವನು ನಕ್ಕರೆ ಸಂಶಯಿಸುವುದು...

ಹೀಗೆ ಹಲವು ಹತ್ತು ಸಂಕಷ್ಟ ಭೂತಗಳನ್ನು(ದೆವ್ವಗಳನ್ನು) ನಿತ್ಯವೂ ಜನರ ಮಾನಸವಲಯದಲ್ಲಿ ಎದ್ದು ಕುಣಿಯುತ್ತಿರುವಂತೆ ಇರುವುದನ್ನು ಕಾಣುತ್ತೇವೆ. ಇಂಥ ಸಂದರ್ಭದಲ್ಲಿ ಕಷ್ಟವನ್ನು ಸಂಕಷ್ಟವಾಗಿಸಿಕೊಂಡ ಮನುಷ್ಯನ ಮನಸ್ಸಿಗೆ ಶಾಂತಿ ಸಮಾಧಾನವಾಗಲು; ವರ್ತುಳಾಕಾರವೂ, ಸದಾ ಚಂಚಲವೂ, ಆದ ಮನಸ್ಸು ಒಂದೆಡೆ ನೆಲೆ ನಿಲ್ಲಲು ಸಂಕಷ್ಟಹರಗಣಪತಿವ್ರತ ರಾಮಬಾಣವಾಗಿದೆ. ಎಲ್ಲ ವ್ರತಗಳೂ ಶರೀರ ತಾಪನೆಯಿಂದ ಮನಸ್ಸನ್ನು ಹದಗೊಳಿಸುವವೇ ಆಗಿವೆ. ಸರ್ವೇ ಮನೋ ನಿಗ್ರಹ ಲಕ್ಷಣಾಂತಾಃ ಎಂಬ ವಚನದಂತೆ ವ್ರತ ನಿಯಮಗಳು ಕಂಡ ಕಡೆ ತಿರುಗುವ ಮನಸ್ಸನ್ನು ಸ್ವಚ್ಛಗೊಳಿಸುತ್ತವೆ. ಅದಕ್ಕೆಂದೇ ಸುಮಾರು ವರ್ಷಕ್ಕೆ ಮುನ್ನೂರೈವತ್ತಕ್ಕೂ ಹೆಚ್ಚು ವ್ರತಗಳನ್ನು ನಾವು ಸನಾತನ ವ್ರತಗಳ ಯಾದಿಯಲ್ಲಿ ಕಾಣಬಹುದು. 

ಈ ವ್ರತಗಳನ್ನು ನಿತ್ಯವ್ರತಗಳು ಮತ್ತು ಕಾಮ್ಯವ್ರತಗಳು; ಉಪವಾಸಾದಿ ನಿಯಮ ಪ್ರಧಾನ ವ್ರತಗಳು ಮತ್ತು ಪೂಜಾಕೈಂಕರ್ಯ ಪ್ರಧಾನವಾಗಿರುವ ವ್ರತಗಳು; ಪುರುಷರ ವ್ರತಗಳು ಮತ್ತು ಸ್ತ್ರೀಯರ ವ್ರತಗಳು; ಲೋಕಾಂತ (ಉತ್ಸವಪ್ರಧಾನ) ವ್ರತಗಳು ಮತ್ತು ಏಕಾಂತ (ವಯಕ್ತಿಕವಾದ) ವ್ರತಗಳು; ವೈದಿಕ ವ್ರತಗಳು, ಸ್ಮಾರ್ತವ್ರತಗಳು, ಪೌರಾಣಿಕ ವ್ರತಗಳು ಮತ್ತು ಲೌಕಿಕ ವ್ರತಗಳು ಹೀಗೆ ಹಲವು ಹತ್ತು ರೀತಿಯಲ್ಲಿ ವಿಭಾಗಿಸಬಹುದು....  

ಪ್ರಕೃತದಲ್ಲಿ ಗಣಪತಿ ತನ್ನ ತಾಯಿಗೆ ಮದುವೆಯ ಸಂದರ್ಭದಲ್ಲೂ, ತಂದೆಗೆ ತ್ರಿಪುರಾಸುರಸಂಹಾರ ಸಂದರ್ಭದಲ್ಲೂ, ಇಂದ್ರನಿಗೆ ಪದವಿಯಿಂದ ಚ್ಯುತನಾದ ಸಂದರ್ಭದಲ್ಲೂ, ಹನುಮಂತನಿಗೆ ಸೀತಾನ್ವೇಷಣೆಯ ಸಂದರ್ಭದಲ್ಲೂ ಕಾರ್ಯಸಿದ್ಧಿಗಾಗಿ ಸಂಕಷ್ಟಹರ ಗಣಪತಿವ್ರತವನ್ನು ಮಾಡಿದಾಗ; ಅವರಿಗೆ ಅಭಯವನ್ನೂ, ನಿರ್ವಿಘ್ನತೆಯನ್ನೂ, ಸಂಕಷ್ಟನಿವಾರಣೆಯನ್ನೂ ಮಾಡಿರುತ್ತಾನೆ. ಹಾಗಾಗಿ ಸಂಕಷ್ಟದಲ್ಲಿರುವ ನಾವು ಅದರ ಪರಿಹಾರಕ್ಕೆ ಅತೀ ಯೋಗ್ಯವಾದ ನಿತ್ಯವ್ರತ ಒಂದಿದ್ದರೆ ಅದು ಸಂಕಷ್ಟಹರಗಣಪತಿ ವ್ರತ.

ಪ್ರತಿಮಾಸಂ ತು ಯಃ ಕುರ್ಯಾತ್ - ತ್ರೀಣ್ಯಬ್ದಾನ್ಯೇಕಮೇವ ವಾ |

ಅಥವಾ ಜನ್ಮ ಪರ್ಯಂತಂ ತಸ್ಯ ದುಃಖಂ ಕದಾಚನ |

ದಾರಿದ್ರ್ಯಂ ಭವೇತ್ತಸ್ಯ ಸಂಕಷ್ಟಂ ಭವೇದಿಹ || 

ಈ ಪೌರಾಣ ವಚನವನ್ನನುಸರಿಸಿ, ಗಣಪತಿಗೆ ಮನಸ್ಸನ್ನು ಅರ್ಪಿಸಿದರೆ ಸಂಕಷ್ಟ ಪಿಶಾಚಿಗಳು ಮನಸ್ಸಿನಿಂದ ದೂರಾಗುವುದರಲ್ಲಿ ಸಂದೇಹವಿಲ್ಲ! ಮನಸ್ಸೊಂದು ಪಕ್ವಗೊಂಡರೆ ಬದುಕೇ ಹಸನಾದಂತೆ! ಜೀವಭಾರವನು ಮರೆತಂತೆ, ಅಲ್ಲವೇ?

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು ।

ನೆನೆಯದಿನ್ನೊಂದನೆಲ್ಲವ ನೀಡುತದರಾ ॥

ಅನುಸಂಧಿಯಲಿ ಜೀವಭಾರವನು ಮರೆಯುವುದು ।

ಹನುಮಂತನುಪದೇಶ – ಮಂಕುತಿಮ್ಮ ||

ನಮ್ಮ ಮನಸ್ಸನ್ನು ಸಂಕಷ್ಟಹರ ಗಣಪತಿಯ ಪದತಳಕ್ಕೆ ಸಮರ್ಪಿಸಿ, ಶಾಂತವಾಗಿಸಿ, ಕಷ್ಟಕೋಟಲೆಗಳನ್ನು ಸಮರ್ಥವಾಗಿ ಎದುರಿಸಿ, ಬದುಕನ್ನು ಬಾಳಾಗಿಸೋಣ. ಹನುಮಂತನನ್ನು ಆದರ್ಶವಾಗಿಸಿ, ಗಣಪತಿಯನ್ನು ಆರಾಧಿಸಿ, ಆರಾಧನಾ ಮಾರ್ಗದಲ್ಲಿ ಮುಂದೆ ಸಾಗೋಣ. ಈ ಶುಭ ಸ್ಮೃತಿ ನಮ್ಮ ಮನಸ್ಸಿನಲ್ಲಿ ಸದಾ ಗಣಪತಿಯನ್ನು ನೆಲೆಯಾಗಿಸಲಿ.... ವಂದನೆಗಳು. 

ಗೌರೀ ಗಣೇಶ ಹಬ್ಬದ ಶುಭಾಶಯಗಳು





ಪರಮೇಶ್ವರ ಪುಟ್ಟನ್ಮನೆ

Sunday, August 18, 2024

ಶ್ರಾವಣದಲ್ಲಿ ರುದ್ರಾನುಷ್ಠಾನ

ನಮಸ್ತೇ  ರುದ್ರ ಮನ್ಯವ ಉತೋತ ಇಷ್ಟವೇ ನಮಃ | 

ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ ||  ರುದ್ರಾಧ್ಯಾಯದ ಆರಂಭ ಮಂತ್ರ ||

 





ವರ್ಷ ಋತುವಿನ ಆರಂಭವೇ ಶ್ರಾವಣ ಮಾಸ. ಮಾಸದಲ್ಲಿ  ಮಳೆಗಾಲದ ಪ್ರಭಾವವನ್ನು ಇವತ್ತಿಗೂ ನಾವು ಕಾಣುತ್ತಿದ್ದೇವೆ.  ಮಳೆಯಿಂದ ಆವೃತವಾದ ಬೆಟ್ಟಗುಡ್ಡಗಳ ನಡುವೆ ಇರುವ ಎಲ್ಲ ಮರಗಿಡಗಳೂ, ಪ್ರಾಣಿಪಕ್ಷಿಗಳೂ ಬೆಳಕಿಗೆ ಕಾಯುತ್ತಿರುವುದು  ಸರ್ವೇಸಾಮಾನ್ಯವಾಗಿರುತ್ತದೆ. ಅವುಗಳಿಗೆ ಆಹಾರ ತಯಾರಿಸಲು ಸೂರ್ಯನ ಬೆಳಕು ಬೇಕೇಬೇಕು. ನಮಗೆ ಅಗ್ನಿಯಿದ್ದರೆ ಕೆಲವು ದಿನ ಕಳೆಯಲು ಸಾಕು. ಒಟ್ಟರ್ಥದಲ್ಲಿ ಜಗದ ಕಣಕಣವೂ ಬೆಳಕನ್ನು ನಿರೀಕ್ಷಿಸುವ ಸಂದರ್ಭ, ಅಗ್ನಿಯನ್ನು ಬಯಸುವ ಸಂದರ್ಭ,,, ಒಂದಿದ್ದರೆ ಅದು ಶ್ರಾವಣ ಸಂದರ್ಭಎಂದರೆ ಅತಿಶಯವಾಗಲಾರದು. ಶ್ರಾವಣ ಮಾಸ ಹಬ್ಬಗಳಿಂದ ಕೂಡಿದ ಶುಭಮಾಸ. ಇಲ್ಲಿಂದಲೇ ಸಾಲು ಸಾಲಾಗಿ ಹಬ್ಬಗಳು ಬರುತ್ತವೆ. ಒಂದು ಕಾಲದಲ್ಲಿ ಮಾಸಪೂರ್ತಿ ರುದ್ರಾಭಿಷೇಕ ಪೂಜೆಗಳು ಮನೆಮನೆಗಳಲ್ಲಿ ಧಾರಾಕಾರವಾಗಿ ಆಚರಣೆಗೊಳ್ಳುತ್ತಿತ್ತು. ಇವೆಲ್ಲವೂ ಬೆಳಕು ಮತ್ತು ಅಗ್ನಿಗಾಗಿ ನಡೆಯುತ್ತಿದೆಯೆಂದರೆ ತಪ್ಪಾಗುವುದೇ?

 


ಬೆಳಕಿನ ಗಣಿ ಸೂರ್ಯ (“ಯೋಸಾವಾದಿತ್ಯಃ”) ಮತ್ತು ಕೃಷ್ಣಯಜುರ್ವೇದದ ಅಗ್ನಿಕಾಂಡದಲ್ಲಿ ಪಠಿತವಾದ (“ ಅಗ್ನಿಃ ಕಾಂಡಋಷಿಃ “) ಅಗ್ನಿದೇವತಾಕ ಮಂತ್ರಸಂಪತ್ತನ್ನು ಹುದುಗಿಸಿಕೊಂಡಶತರುದ್ರೀಯಸಂಜ್ಞೆ ಹೊಂದಿದ ಮಂತ್ರ ಸಮೂಹವೇ ರುದ್ರೋಪನಿಷತ್ತು ಅಥವಾ ರುದ್ರಾಧ್ಯಾಯ. ಹೀಗೆ ಸೂರ್ಯ ಅಂದರೆ ಬೆಳಕು ಮತ್ತು ಅಗ್ನಿ ಎಂದರೆ ಶಾಖ... ಇವೆರಡಕ್ಕೂ ಆಶ್ರಯವಾದದ್ದೇ ರುದ್ರ. ಹೀಗೆ ಒಂದೇ ಮಂತ್ರಭಾಗ ಬೆಳಕಾಗಿಯೂ, ಅಗ್ನಿಯಾಗಿಯೂ ಕಂಡಿದ್ದು ಋಷಿಗಳ ಪರಿಶ್ರಮದ ಫಲವೆನ್ನಬೇಕು. ರುದ್ರಾಧ್ಯಾಯ ಜ್ಞಾನದ ದೀವಿಗೆಯಾಗಿ, ಪ್ರಭೆಯಾಗಿ ಅಮೃತತ್ವವನ್ನು ಉಂಟುಮಾಡುತ್ತದೆಯೆಂದು ಜಾಬಾಲೋಪನಿಷತ್ತಿನಲ್ಲಿ ಎತ್ತಿ ಹೇಳಿದ್ದಾರೆ. ಇದೇ ರುದ್ರೋಪನಿಷತ್ತು ಜಪ ಹೋಮ-ಅಭಿಷೇಕರೂಪವಾದ ಕರ್ಮದಿಂದ ಮನುಷ್ಯನ ಪಾಪವನ್ನು ಸಂಪೂರ್ಣವಾಗಿ ತೊಳೆಯುತ್ತದೆಯೆಂದು ಕೈವೈಲ್ಯೋಪನಿಷತ್ತು ಸಾರುತ್ತದೆ. ಒಟ್ಟರ್ಥದಲ್ಲಿ  ಜ್ಞಾನಕ್ಕೂ ಕರ್ಮಕ್ಕೂ ಕೇಂದ್ರವಾದ ಒಂದೇ ಮಂತ್ರಸಮೂಹವಿದ್ದರೆ ಅದು ರುದ್ರಾಧ್ಯಾಯ. ತಕ್ಕಡಿಯ ಕೇಂದ್ರಸೂಚಿಯಂತೆ, ಜಪಮಾಲೆಯ ಮಧ್ಯಮಣಿಯಂತೆ, ಸೌರಮಂಡಲದ ತೇಜಃಪುಂಜದಂತೆ, ಮಧ್ಯಮಮಾರ್ಗದ ಅಪರೂಪದ ಕೊಂಡಿಯಂತೆ ನಿಂತಿರುವ ಈ ರುದ್ರಾಧ್ಯಾಯ “ ವೇದಗಳ ಮಧ್ಯೆ ಶೋಭಿಸುವ ಯಜುರ್ವೇದದಲ್ಲಿ ಬರುವ ಪಂಚಕಾಂಡಗಳ ಮಧ್ಯದ ಅಗ್ನಿಕಾಂಡದಲ್ಲಿರುವ ಹನ್ನೊಂದು ಅನುವಾಕಗಳ ಮಧ್ಯದ “ನಮಃ ಸೋಮಾಯಚ” ಎಂಬ ಅನುವಾಕದ ಮಧ್ಯ ಮಂತ್ರವಾದ “ನಮಃ ಶಿವಾಯ” ಎಂಬ ಪಂಚಾಕ್ಷರಗಳನ್ನು ಧರಿಸಿದ್ದು, ನಮ್ಮನ್ನು ಉದ್ಧರಿಸಲಿಕ್ಕೆಂದು ನಂಬಿದರೆ ಅದು ಸರ್ವಥಾ ತಪ್ಪಲ್ಲ! ಈ ನಂಬಿಕೆಯೇ ಶ್ರದ್ಧೆಯಾಗಿ, ಯಜ್ಞ ಸಂಸ್ಕೃತಿಯ ಬುನಾದಿಯಾಗಿ ಇವತ್ತಿಗೂ ರುದ್ರಾನುಷ್ಠಾನವಾಗಿ ಮನೆ ಮನೆಗಳಲ್ಲಿ ರಾರಾಜಿಸುತ್ತಿದೆ. 





ಯಜ್ಞಕ್ಕೆ ಬೇಕಾದ ಎರಡು ಮುಖ್ಯ ತತ್ವ ಗಳೆಂದರೆ ಅಗ್ನಿ ಮತ್ತು ಸೋಮಗಳು. ಅವೆರಡೂ ರುದ್ರನೇ ಆಗಿದ್ದು, ಯಜ್ಞಸಂಸ್ಕೃತಿಯ ಬೆನ್ನೆಲುಬೇ ರುದ್ರನಾಗಿದ್ದಾನೆ ಎನ್ನಬಹುದು. ಅಗ್ನಿ - ಆಹುತಿ ಸ್ವೀಕರಿಸುವವ, ಸೋಮ – ಆಹುತಿಯಾಗುವವ, ಇವೆರಡರಲ್ಲಿ ಇಡೀ ಜಗತ್ತನ್ನೇ ಸಮೀಕರಿಸಿದ ನಮ್ಮ ಸನಾತನ ೠಷಿಗಳು ಇವೆರಡಕ್ಕೂ ಒಂದೇ ತತ್ವಾಧಿಷ್ಠಾನವನ್ನು ತೋರಿಸಿದ್ದು ಸೋಜಿಗವೆನೆಸಿದೆ! ಅಂದರೆ ನಮಗೆ ಕಾಣುವ ಮತ್ತು ಕಾಣದ (ನಾವು ಅನುಭವಿಸುವ ಮತ್ತು ನಮ್ಮ ಅನುಭವಕ್ಕೆ ನಿಲುಕದ) ಇಡೀ ಪ್ರಪಂಚವೂ ಕೂಡ ಒಂದೋ ಅಗ್ನಿಯಾಗಿರಬೇಕು; ಇಲ್ಲವೋ ಸೋಮವಾಗಿರಬೇಕು; ಅದಿಲ್ಲದಿದ್ದರೆ ಉಭಯವೂ ಆಗಿರಬೇಕು. ’ಅದು ಯಾವುದಾದರೂ ಆಗಿರಲಿ - - ಅದು ಅರ್ಧನಾರೀಶ್ವರನಾದ, ಸೋಮೇಶ್ವರನಾದ, ದೇವದೇವನಾದ, ಲಿಂಗರೂಪನಾದ ಮಹಾದೇವನನ್ನೇ ಪ್ರತಿನಿಧಿಸುತ್ತದೆ.’ ಎಂಬಲ್ಲಿಗೆ ಒಂದು ಯಜ್ಞ ಅಥವಾ ಒಂದು ಕರ್ಮ ಅಥವಾ ಜಪಹೋಮಾತ್ಮಕವಾದ ಒಂದು ಅನುಷ್ಠಾನ ಇಹ ಮತ್ತು ಪರಗಳೆರಡಕ್ಕೂ ಸಾಧನವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

 



ಇಹ ಮತ್ತು ಪರಗಳೆರಡರಲ್ಲೂ ವಿಶ್ವಾಸವಿರಿಸಿದ್ದ ನಮ್ಮ ಋಷಿಗಳು ರುದ್ರನ ನಾಮರೂಪಗಳನ್ನು ಕೊಂಡಾಡಿ, ನಮಿಸಿ ನಮಕ ಮಂತ್ರಗಳನ್ನು ಹೇಳಿದ್ದಲ್ಲದೇ,  “ಯಜ್ಞಕ್ಕೋಸ್ಕರ ನನಗೆ ಎಲ್ಲವೂ ದೊರಕಲಿ” ಎಂಬ ಸದಾಶಯದಿಂದ ಕೇಳಿಕೊಳ್ಳುವ ಚಮಕಗಳನ್ನೂ ಕಟ್ಟಿಕೊಟ್ಟಿರುವರು... ನಮಕ ಮತ್ತು ಚಮಕರೂಪವಾದ ಇಡೀ ರುದ್ರಾಧ್ಯಾಯದಲ್ಲಿ ಭಕ್ತಿಯಿದೆ, ಬೇಡಿಕೆಯಿದೆ; ಉಪಾಸನೆಯಿದೆ, ಉತ್ಪಾದನೆಯಿದೆ; ವಿಭೂತಿಯಿದೆ, ಪ್ರಾಪ್ತಿಯಿದೆ; ಜ್ಞಾನವಿದೆ, ಕರ್ಮವಿದೆ;  ನೀವೇನನ್ನು ನೋಡುತ್ತೀರೋ ಅದೆಲ್ಲವನ್ನೂ ತನ್ನಲ್ಲಿ ತೋರುವ ಒಂದು ಅಪರೂಪದ ಮಂತ್ರಭಾಗ ಇದಾಗಿದೆ. ಇಲ್ಲಿ ಪುನರುಕ್ತವಾಗುವ ’ನಮೋ’ ಶಬ್ದವು, ಪದೇ ಪದೇ ಕೇಳಿ ಬರುವ ಚ-ಮೇ ಎಂಬ ಶಬ್ದಗಳು ಮಂತ್ರದುದ್ದಕ್ಕೂ  ಅನುರಣನವಾಗುತ್ತಾ, ಇಡೀ ರುದ್ರಾಧ್ಯಾಯದ ಸೌಂದರ್ಯವನ್ನು ದಿವ್ಯತೆಗೆ ಏರಿಸಿವೆ. ಈ ದಿವ್ಯವಾದ ನಾದತರಂಗಗಳು ವಿಸ್ಮಯ, ಹರ್ಷ ಹಾಗೂ ಶ್ರದ್ಧೆ; ಹೀಗೆ ಈ ಮೂರೂ ಭಾವನೆಗಳನ್ನು ಏಕತ್ರಗೊಳಿಸಿ, ವಿಶಿಷ್ಟವಾದ ಅನುಭೂತಿಯೊಂದನ್ನು ಬಿಂಬಿಸುವ ಮಾಂತ್ರಿಕ ಶಕ್ತಿಯನ್ನು ಹೊಂದಿವೆ. ಇಂಥ ಅಪರೂಪದ ಶಕ್ತಿಗಳಿಂದ ಕೂಡಿದ ರುದ್ರ ತನ್ನ ಘೋರ ರೂಪವನ್ನು ಶಾಂತಗೊಳಿಸಿ, ಅನುಗ್ರಹಿಸಬೇಕೆಂಬುದು ಇಡೀ ರುದ್ರಾನುಷ್ಠಾನದ ವಿಶಿಷ್ಟ ಪ್ರಾರ್ಥನೆಯಾಗಿದೆ.   



ಬೆಳಕು ಹೆಬ್ಬೆಳಕಾದರೆ ಕಾಣಿಸುವ ಕಣ್ಣನ್ನೂ ತೆರೆಯುವುದು ಕಷ್ಟವಾಗಿ ಬಿಡುತ್ತದೆ. ಅದೇ ಅಗ್ನಿ ಬೆಂಕಿಯಾದರೆ ಅಥವಾ ಕಿಚ್ಚಾದರೆ, ಅದು ನಮ್ಮ ಮನಸ್ಸು, ಮನೆ ಮತ್ತು ಮನುಕುಲವನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಹೀಗಾಗದೇ ಘೋರರೂಪೀ ರುದ್ರನು ನಮ್ಮಿಂದ ಹವಿಸ್ಸನ್ನೋ, ಸ್ತುತಿಯನ್ನೋ ಸ್ವೀಕರಿಸಿ... ಅಘೋರರೂಪದಿಂದ ಮನಸ್ಸನ್ನು ಶಿವವಾಗಿಸಿ, ಮನೆಯನ್ನು ಶುಭವಾಗಿಸಿ, ಮನುಕುಲವನ್ನು ಶಂಕರನಾಗಿ ಅನುಗ್ರಹಿಸಲಿ.

 

ನಮಿಪೆ ನಮಿಪೆನು ರುದ್ರ ದೇವನೆ ನಿನ್ನ ಕೋಪಕೆ ಬಾಣಗಳಿಗೆ |

ನಮಿಪೆ ಪುನರಪಿ ನಿನ್ನ ಬಿಲ್ಲಿಗೆ, ಮತ್ತೆ ತೋಳ್ಗಳಿಗೆ .... |

 ಪರಮೇಶ್ವರ ಪುಟ್ಟನ್ಮನೆ