Tuesday, June 16, 2026

ಸ್ವಾಹೇತ್ಯಾದಿ ಸಂತತಧಾರಯೇತಿ ಮೀಮಾಂಸಕಾಃ

ವಸೋರ್ಧಾರಾ ಕುರಿತ ವಿಷಯವನ್ನು ಪೂರ್ವ ಮೀಮಾಂಸೆಯ ೧೨ನೇ ಅಧ್ಯಾಯದ ೩ನೇ ಪಾದ ೧೧ನೇ ಅಧಿಕರಣದಲ್ಲಿ ಕಾಣಬಹುದು.

೧೦ನೇ ಅಧಿಕರಣದಲ್ಲಿ ಮಂತ್ರಾಂತೇನ ಕರ್ಮಾದಿ ಸನ್ನಿಪಾತಸ್ಸ್ಯಾತ್ ಎಂದು ವಿವರಿಸುವಾಗ ಮಂತ್ರದ ಕೊನೆಯ ಶಬ್ದ ಹೇಳಿ ಮುಗಿಯದೇ ಆ ಮಂತ್ರ ಅರ್ಥವಾಗಲಾರದಷ್ಟೇ? ಹಾಗಾಗಿ ಮಂತ್ರಾದಿ ಮತ್ತು ಮಂತ್ರಮಧ್ಯಗಳಲ್ಲಿ ಕರ್ಮವನ್ನು ಕೈಗೊಳ್ಳದೇ ಮಂತ್ರದ ಅಂತ್ಯದಲ್ಲಿ ಕರ್ಮವನ್ನು ಆಚರಿಸುವಂತೆ ಸಿದ್ಧಾಂತಿಸಲಾಗಿದೆ.

ಇದನ್ನು ಪ್ರಶ್ನಿಸಿ ೧೨ನೇ ಅಧಿಕರಣದಲ್ಲಿ ವೈಷಮ್ಯವನ್ನು ತೋರಿಸುತ್ತಾ ಸಂತತಾಂ ವಸೋರ್ಧಾರಾಂ ಜುಹೋತಿ ಅಥವಾ ದ್ವಾದಶದ್ವಾದಶಾನಿ ಜುಹೋತಿ ಎಂಬಲ್ಲಿ ಅವಿಚ್ಛಿನ್ನಧಾರೆ ಅಥವಾ ಸಾಂತತ್ಯ ವಿಹಿತವಾಗಿದೆ. ಮಂತ್ರಾದಿಯಲ್ಲಿ ಮಂತ್ರ ಮತ್ತು ಕರ್ಮಗಳ ಸಾಹಿತ್ಯ ಸ್ಪಷ್ಟ ಎಂದು ಪೂರ್ವಪಕ್ಷ ಮಾಡಿದ್ದಾರೆ. ವಿಚಿತ್ರವೆಂಬಂತೆ ಸಂತತವಚನಾದ್ಧಾರಾಯಾಮಾದಿ ಸಂಯೋಗಃ ಎಂಬುದು ಪೂರ್ವ ಪಕ್ಷವಾಗಿ ಸೂತ್ರಿತವಾಗಿದೆ.


ಕರ್ಮಸಂತಾನೋ ವಾ ನಾನಾಕರ್ಮತ್ವಾದಿತರಸ್ಯಾಶಕ್ಯತ್ವಾತ್ ಎಂಬುದು ಸಿದ್ಧಾಂತ. ಇಲ್ಲಿ ಹನ್ನೆರಡೂ ಹೋಮಗಳ ಸಾಂತತ್ಯ ಹೇಳಲ್ಪಟ್ಟಿದ್ದು, ಮಂತ್ರಕರ್ಮಗಳ ಸಾಂತತ್ಯವಲ್ಲ! ಕ್ಷಣಿಕ ಕರ್ಮವು ಮಂತ್ರದ ಜೊತೆ ಸಾಗಲಾರದು! ಮಂತ್ರಕರ್ಮಸಾಂತತ್ಯಸ್ಯ ಅಶಕ್ಯತ್ವಾತ್ ಎಂದು ಪ್ರತಿಪಾದಿಸಿದ್ದಾರೆ.

ಹಾಗಾದರೆ ಆಘಾರಹೋಮದಲ್ಲಿ ಕರ್ಮ ಮತ್ತು ಮಂತ್ರಗಳ ಸಂಯೋಗ ಕಾಣಿಸುತ್ತಿದೆಯಲ್ಲ!? ಎಂಬುದು ಮುಂದಿನ ಅಧಿಕರಣದ ವಿಶಯವಾಗಿದೆ. ಆಘಾರೇ ಚ ದೀರ್ಘ ಧಾರಾತ್ವಾತ್ ಆಘಾರದಲ್ಲಿ ಧಾರಾ ಹೋಮ ಮಾತ್ರ ಗ್ರಾಹ್ಯ ವಾಗಿದೆ. ಇಲ್ಲಿಯೂ ಕರ್ಮಸಾಂತತ್ಯ ಮುಖ್ಯವಾಗುವುದಿಲ್ಲ! ಎಂದು ಸಿದ್ಧಾಂತ ಮಾಡಿದ್ದಾರೆ...

 ನೋಡುತ್ತಾ ನೋಡುತ್ತಾ ಮೂರು ಅಧಿಕರಣಗಳನ್ನು ಚರ್ಚಿಸಿದಂತೆ ಆಯಿತು... ಇದೆಲ್ಲದರಿಂದ ಮೀಮಾಂಸಕರ ಅಭಿಪ್ರಾಯ ಸುಸ್ಪಷ್ಟವಾಗಿ ಗೋಚರಿಸುತ್ತದೆ. ಮಂತ್ರ ಮತ್ತು ಆಜ್ಯಧಾರೆ ಏಕಕಾಲದಲ್ಲಿ ಆರಂಭವಾಗಲಾರದು. ಪ್ರತೀಮಂತ್ರವನ್ನೂ ಪಠಿಸಿ ಆದಮೇಲೆ ಕರ್ಮದ ವಿನಿಯೋಗ ಯುಕ್ತವಾಗಿದೆ.  ಎಲ್ಲಿ ಧಾರೆ ಅಪೇಕ್ಷಿತವೋ, ಅಲ್ಲಿ ಚತುರ್ಗೃಹೀತ ಮಾಡಿ ಹೋಮಿಸುವುದು ಸರಿಯಾದ ಕ್ರಮವೇ ಹೊರತು ಮಂತ್ರಾರಂಭದಿಂದ ಧಾರೆಯನ್ನು ಮೀಮಾಂಸಾ ಸುತರಾಂ ಒಪ್ಪುವುದಿಲ್ಲ! ಧನ್ಯವಾದಗಳು