Monday, November 09, 2015

ಮಾನವನ ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕೃತ ಸಾಧನ



ಮಾನ್ಯರೇ,
ವ್ಯಕ್ತಿತ್ವ-ವಿಕಸನ ಎಂಬ ವಿಷಯದ ಬಗ್ಗೆ ಮನುಷ್ಯರಾದ ನಾವು ಯೋಚಿಸುವಂತೆ ಪಶು-ಪಕ್ಷಿಗಳಾಗಲೀ ಹುಳ-ಹುಪ್ಪಡಿಗಳಾಗಲೀ ಯೋಚಿಸುವುದೂ ಇಲ್ಲ, ಚಿಂತಿಸುವುದೂ ಇಲ್ಲ. ಏಕೆಂದರೆ ಅವುಗಳಿಗೆ ಅದರ ಅಗತ್ಯವಿಲ್ಲ. ಅವುಗಳ ವಿಕಾಸ (ಬೆಳವಣಿಗೆ) ಅನಾಯಾಸವಾಗಿ ಆಗುತ್ತಲೇ ಇರುತ್ತದೆ. ಆದರೆ ಮನುಷ್ಯನ ಬದುಕಿನ ರೀತಿಯೇ ಬೇರೆ. ಅವನು ನೆಲದಲ್ಲಿ ನೆಲೆಸುವಂತೆ ನೀರಿನಲ್ಲೂ ಬದುಕಬಲ್ಲ. ಆಕಾಶದಲ್ಲೂ ಹಾರಾಡಬಲ್ಲ. ಮಾಂಸ ತಿಂದು ಅರಗಿಸಬಲ್ಲ. ಹುಲ್ಲು ತಿಂದೂ ಬದುಕಬಲ್ಲ. ಈತ ತ್ಯಾಗಿಯೂ ಆಗ ಬಲ್ಲ, ಭೋಗಿಯೂ ಆಗಬಲ್ಲ. ಪ್ರಾಣ ಕೊಡಬಲ್ಲ, ಪ್ರಾಣ ಕೊಳ್ಳಬಲ್ಲ. ತನ್ನ ಜೀವನವನ್ನು ರೂಪಿಸಬಲ್ಲನಷ್ಟೇ ಅಲ್ಲ, ತನಗೆ ಬೇಕಾದ ಜಗತ್ತನ್ನೂ ನಿರ್ಮಿಸಬಲ್ಲ, ಕಟ್ಟಬಲ್ಲ, ಕೆಡವಬಲ್ಲ. ಇದು ಮನುಷ್ಯಜೀವನಕ್ಕೆ ಸಂಬಂಧಿಸಿದ ಸತ್ಯಸಂಗತಿ. ಇದನ್ನು ಭಾರತೀಯ ಋಷಿ-ಮುನಿಗಳು ಸಾವಿರಾರು ವರುಷಗಳ ಹಿಂದೆಯೇ ಕಂಡುಕೊಂಡರು. ಈ ಸತ್ಯವನ್ನಲ್ಲದೇ ನಮ್ಮ ಪೂರ್ವಜರು ಇನ್ನೊಂದು ಐತಿಹಾಸಿಕ ಸತ್ಯವನ್ನೂ ಅರಿತುಕೊಂಡರು. ಅದೆಂದರೆ ವಿಶ್ವದ ಆರಂಭದಿಂದಲೂ ಇಡಿಯ ಜಗತ್ತಿನ ಆಗುಹೋಗುಗಳಿಗೆ ಮನುಷ್ಯನೇ ಕಾರಣ. ಜಗತ್ತಿನಲ್ಲಿ ಹಿಂದೆ ಆಗಿಹೋದ, ಇಂದಾಗುತ್ತಿರುವ, ಮುಂದೆ ಆಗಬಹುದಾದ ಉನ್ನತಿ-ಅವನತಿಗಳಿಗೆಲ್ಲಾ ಮನುಷ್ಯನೇ ಕಾರಣ. ಅದಕ್ಕಾಗಿಯೇ ಪೂರ್ವಜರು-ಭಾರತೀಯರು-ಮಾನವರು ದಾನವತ್ವದ ಕಡೆ ಹೊರಳದೇ, ದೇವತ್ವದ ಕಡೆ ಮುನ್ನಡೆಯುವಂತೆ ಅವನ ಬೆಳವಣಿಗೆಯ ಅಂದರೆವ್ಯಕ್ತಿತ್ವ ವಿಕಸನದ ರಾಜಮಾರ್ಗ ಕಂಡುಹಿಡಿದರು. ಅದರ ಪರಿಚಯವನ್ನು ಈಗ ಮಾಡಿ ಕೊಳ್ಳೋಣ.

’ ಭಾರತಸ್ಯ ಪ್ರತಿಷ್ಠೇ ದ್ವೇ ಸಂಸ್ಕೃತಂ ಸಂಸ್ಕೃತಿಸ್ತಥಾ ’ ಎಂಬ ಆರ್ಯೋಕ್ತಿಯಂತೆ ಸಂಸ್ಕೃತ ನಮ್ಮ ದೇಶಕ್ಕೆ ಗೌರವ ತಂದು ಕೊಟ್ಟ ಭಾಷೆ. ಅದು ನಮ್ಮ ರಾಷ್ಟ್ರಿಯ ಸಂಪತ್ತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಭಾಷೆ ಭರತ ಖಂಡದ ಜೀವನಾಡಿ; ಸಂಸ್ಕೃತಿಯ ವಾಹಿನಿ. ರಾಷ್ಟ್ರಕವಿ ಕುವೆಂಪು ಅವರು ’ಸಂಸ್ಕೃತ ಮಾತೆ’ ಎಂಬ ತಮ್ಮ ಕವನ ಸಂಕಲನದಲ್ಲಿ ಸಂಸ್ಕೃತದ ಪ್ರಾಚೀನತೆ ಮತ್ತು ಮಹತ್ವಗಳ ಕುರಿತು ಹೀಗೆ ಹಾಡುತ್ತಾರೆ.
“ಪೃಥ್ವಿಯಾ ಪ್ರಥಮ ಪ್ರಭಾತದಲಿ, ಇತಿಹಾಸ ದೃಷ್ಟಿಗಸ್ಪಷ್ಟ ಅಜ್ಞಾತ ಪ್ರಾಚೀನದಲಿ
ಚಿರಧವಲ ಹಿಮಕಿರಣ ಪೃಥುಲೋರು ಪ್ರೇಂಖದಲಿ, ನವಜಾತ ಶಿಶುವಾಗಿ ನಲಿದ ಮಂಗಲಮಾಯೀ”
ಇತಿಹಾಸ ತಜ್ಞರಿಗೂ ನಿಲುಕದ ಸೃಷ್ಟಿಯ ಆರಂಭದಲ್ಲಿ, ಅತಿ ಪ್ರಾಚೀನ ಕಾಲದಲ್ಲಿ, ಹಿಮಗಿರಿಯ ಕಂದರಗಳಲ್ಲಿ ಮೊಳಗಿದ ಭಾಷೆಯಿದು. ಇದು ಕೇವಲ ಪ್ರಾಚೀನ ಮಾತ್ರವಲ್ಲ, ಸತ್ವಯುತ ಭಾಷೆಯೂ ಹೌದು. ಈ ರಾಷ್ಟ್ರದ ತಂದೆ, ’ಬಾಪೂಜಿ’ ಎಂದು ಗೌರವಿಸುವ ಗಾಂಧಿಯವರು “The education of any Hindu child is incomplete, unless he has got some knowledge of Sanskrit.” ಅಂದರೆ ಹಿಂದೂಸ್ಥಾನದ ಪ್ರತಿಮಗುವಿನ ವಿದ್ಯಾಭ್ಯಾಸ ಸಂಸ್ಕೃತದ ಪರಿಚಯವಿಲ್ಲದಿರೆ ಅಪರಿಪೂರ್ಣ. ಹಾಗಾಗಿ ’ಸಂಸ್ಕೃತದಲ್ಲಿ ನಮ್ಮ ವ್ಯಕ್ತಿತ್ವವನ್ನು ಸಂಸ್ಕರಿಸಬಲ್ಲ, ನಮ್ಮ ಬದುಕಿಗೆ ಹೊಸ ಆಯಾಮವನ್ನು ಕೊಡಬಲ್ಲ, ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲ ಅಪೂರ್ವ ಶಕ್ತಿಯಿದೆ.’ ಎಂಬುದು ಸ್ಪಷ್ಟ. ಈ ಮಾತಿಗೆ ಪೂರಕವಾಗಿ ಸಂಸ್ಕೃತ ಸಾಹಿತ್ಯದಲ್ಲಿ ಬರುವ ಕೆಲವೇ ಕೆಲವು ಸಂದರ್ಭ ಸೂಕ್ತಿಗಳನ್ನು ಇಲ್ಲಿ ಗಮನಿಸೋಣ.

ಸಂಸ್ಕೃತ ಸಾಹಿತ್ಯದ ಅತ್ಯಂತ ಪ್ರಾಚೀನ ಗ್ರಂಥವಾದ ಋಗ್ವೇದದಲ್ಲಿ ರಾಷ್ಟ್ರಿಯ ಭಾವೈಕ್ಯವನ್ನು “ ಸಮಾನೀವ ಆಕೂತಿಃ ಸಮಾನಾ ಹೃದಯಾನಿ ವಃ “ ಮತ್ತು “ ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್ “ ಎಂದು ಹೇಳುವುದರ ಮುಖೇನ ನಮ್ಮ ಯೋಚನೆ, ನಮ್ಮ ಭಾವನೆ, ನಮ್ಮ ಹೃದಯ, ನಮ್ಮ ಮನಸ್ಸು ಎಲ್ಲ ಒಂದಾಗಿ; ನಾವೆಲ್ಲರೂ ಒಟ್ಟಿಗೆ ಮುಂದೆ ಸಾಗೋಣ; ಬಲಿಷ್ಠ ರಾಷ್ಟ್ರ ಕಟ್ಟೋಣ.“ ಎಂದು ಕರೆ ನೀಡುತ್ತದೆ. ಅಥರ್ವವೇದವಂತೂ ಇನ್ನೂ ಮುಂದೆ ಸಾಗಿ “ವಿಶ್ವಂ ಭವತ್ಯೇಕ ನೀಡಮ್.“ ಎನ್ನುತ್ತಾ ಇಡೀ ಜಗತ್ತೇ ಹಕ್ಕಿಯ ಗೂಡಾಗಬೇಕೆಂದು ಸಾರುತ್ತದೆ. ನಮ್ಮ ನಡುವೆಯಿರುವ ಜಾತಿ, ಮತ, ಪಂಥಗಳ ಅಡ್ಡಗೋಡೆಗಳನ್ನು ಕುಟ್ಟಿ ಕೆಡುಹಿ, ಇಡೀ ಜಗತ್ತನ್ನೇ ಒಂದು ಗೂಡಾಗಿಸಬೇಕು; ಅಂಥ ಜಗದ ಲವಲವಿಕೆಯ ಹಕ್ಕಿಗಳು ನಾವಾಗಬೇಕು. ಎಂಬ ಕಲ್ಪನೆ ನಮ್ಮ ಮನೋಭಾವವನ್ನು ವಿಸ್ತರಿಸಿ, ವಿಶ್ವಮಾನವರನ್ನಾಗಿ ಮಾಡುತ್ತದೆ. ಮತ್ತದೇ ಋಗ್ವೇದದಲ್ಲಿ ’ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ.’ ‘Let the noble thoughts come from every side.’ ಎಂದು ಹೇಳಿದೆ. ಹೇಗೆ ಒಂದು ಕೊಠಡಿಯ ಕಿಟಕಿ, ಬಾಗಿಲುಗಳನ್ನು ತೆರೆದಾಗ ಗಾಳಿ, ಬೆಳಕುಗಳು ಕೊಠಡಿಯ ತುಂಬ ಪಸರಿಸುವವೋ; ಹಾಗೆ ನಮ್ಮ ಹೃದಯ, ಮನಸ್ಸುಗಳ ಕದವನ್ನು ತೆರೆದಾಗ ಒಳ್ಳೆಯ ವಿಚಾರಗಳು ನಮ್ಮನ್ನು ಆವರಿಸುತ್ತವೆ. ಇಂಥ ವಿಚಾರಗಳನ್ನು ಮುಕ್ತಮನಸ್ಸಿನಿಂದ ಸ್ವಾಗತಿಸೋಣ. ಇದೇ ರೀತಿ ’ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ, ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ.’ ಎಂಬಂತೆ ’ಕಿವಿ, ಕಣ್ಣುಗಳಿಂದ ಒಳಿತನ್ನು ಕಂಡುಂಡು ನೂರ್ಕಾಲ ಬಾಳೋಣ.’ ಎಂದು ಸಂಸ್ಕೃತ ಸಾಹಿತ್ಯದ ಮೂಲ ಸ್ತಂಭಗಳಾದ ವೇದಗಳು ನಮ್ಮ ವ್ಯಕ್ತಿತ್ವವನ್ನು ಉದಾತ್ತಗೊಳಿಸಲು ಕರೆ ನೀಡುತ್ತವೆ.

ವ್ಯಕ್ತಿತ್ವ-ವಿಕಸನ ಎಂಬುದನ್ನು ತಿಳಿಯಬೇಕಾದರೆ ವ್ಯಕ್ತಿತ್ವ ಎಂಬುದರ ಅರ್ಥ ತಿಳಿಯ ಬೇಕಾಗುತ್ತದೆ. ಮನುಷ್ಯನ ವ್ಯಕ್ತಿತ್ವದಲ್ಲಿ ಪ್ರಮುಖವಾಗಿ ಮೂರು ಅಂಗಗಳು ಕೂಡಿಕೊಂಡಿವೆ. ಅವುಗಳೆಂದರೆ ಬುದ್ಧಿ, ಮನಸ್ಸು ಮತ್ತು ಇಂದ್ರಿಯಗಳುಳ್ಳ ದೇಹ. ಇವುಗಳಲ್ಲಿ ಬುದ್ಧಿ ಒಂದೆಡೆಯಿದ್ದರೆ ಇಂದ್ರಿಯಗಳು ಇನ್ನೊಂದು ಕಡೆ ಇವೆ. ಬುದ್ಧಿಯಲ್ಲಿ ಅರಿವು ತುಂಬಿ ಅದು ಪ್ರಬಲವಾದರೆ, ಅದರಂತೆ ಮನಸ್ಸು-ಇಂದ್ರಿಯಗಳು ಕಾರ್ಯಪ್ರವೃತ್ತವಾಗುತ್ತವೆ. ಹೀಗಾದಾಗಲೇ ಮಾನವನು ದೇವನಾಗುವ (ಒಳ್ಳೆಯವನಾಗುವ) ಸಾಧ್ಯತೆ ಅಧಿಕವಾಗುತ್ತದೆ. ತದ್ವಿರುದ್ಧವಾಗಿ, ಇಂದ್ರಿಯಗಳು ಬಲಶಾಲಿಯಾಗಿ ಅವುಗಳ ಇಚ್ಛೆಯಂತೆ ಮನಸ್ಸು-ಬುದ್ಧಿಗಳೆರಡೂ ಕೆಲಸ ಮಾಡತೊಡಗಿದರೆ ಮಾನವನು ದಾನವನಾಗುವ (ಕೆಟ್ಟವನಾಗುವ) ಸಂಭವ ಬಲಿಯುತ್ತದೆ. ಶಾರೀರಿಕ ಅಂಗವೈಕಲ್ಯದಿಂದ ಮನುಷ್ಯನು ವಿಕಲಾಂಗನಾಗುವುದಿಲ್ಲ. ಆದರೆ ಬೌದ್ಧಿಕ ವೈಕಲ್ಯದಿಂದ ಸಂಪೂರ್ಣ ವಿಕಲಾಂಗನಾಗಿ ಪಶುವೇ ಆಗಿಬಿಡುತ್ತಾನೆ. ಆದುದರಿಂದ ಹಿತಕಾರಕ ವ್ಯಕ್ತಿತ್ವ ವಿಕಸನವಾಗಬೇಕಾದರೆ ಬುದ್ಧಿ ಬಲಶಾಲಿಯಾಗುವಂತೆ ಪ್ರಯತ್ನವಾಗಬೇಕು. ಒಳಿತು-ಕೆಡುಕುಗಳ ಅರಿವನ್ನು ತುಂಬಿದ ಬುದ್ಧಿಗೇ ವಿವೇಕವೆನ್ನುವರು. ಇಂತಹ ವಿವೇಕೋದಯಕ್ಕೆ ಒಳ್ಳೆಯ ಆಲೋಚನೆಯ ಜೊತೆಗೆ ಉತ್ತಮ ಪ್ರಾರ್ಥನೆಯೂ ಬೇಕು. ಅದಕ್ಕಾಗಿ ಪೂರ್ವಜರು “ಧಿಯೋ ಯೋ ನಃ ಪ್ರಚೋದಯಾತ್.“ ಎಂದು ಪ್ರಾರ್ಥಿಸಿದರು.

ಹೀಗೆ ಮನಸ್ಸು ಬುದ್ಧಿಗಳಿಗೆ ಉತ್ತಮ ಆಹಾರವನ್ನು ಸಂಸ್ಕೃತ ಸಾಹಿತ್ಯ ಮಾನವ ಸಮಾಜಕ್ಕೆ ನೀಡಿದೆ. ಜೊತೆಗೆ ಶಾರೀರಿಕ ದೃಢತೆಗೂ ಈ ಸಾಹಿತ್ಯದಲ್ಲಿ ವಿಪುಲ ಸಂಗ್ರಹಗಳಿವೆ. ಉದಾಹರಣೆಯಾಗಿ ಧನ್ವಂತರಿಯು ವೈದ್ಯಶ್ರೇಷ್ಠರಾದ ವಾಗ್ಭಟರಲ್ಲಿ “ಕೋರುಕ್ ?” ಅಂದರೆ ಯಾರು ರೋಗ ಬಾರದವರು? ಎಂದು ಪ್ರಸ್ನಿಸಿದಾಗ ಅವರು ’ಹಿತಭುಕ್, ಮಿತಭುಕ್, ಶಾಕಭುಕ್.’ ಎಂದು ಹೇಳಿದರು.  ಅದರರ್ಥ “ ಯಾರು ಹಿತಮಿತವಾಗಿ ಆಹಾರವನ್ನು ಸೇವಿಸುತ್ತಾ, ಕಾಯಿಪಲ್ಲೆಗಳನ್ನೇ ಹೆಚ್ಚು ಹೆಚ್ಚಾಗಿ ಉಪಯೋಗಿಸುವರೋ ಅವರೇ ಆರೋಗ್ಯವಂತರು.” ಎಂದು. ಇದೇ ರೀತಿ ಆಯುರ್ವೇದ, ಯೋಗಶಾಸ್ತ್ರಗಳಲ್ಲಿ ದೇಹಾರೋಗ್ಯವನ್ನು ಚೆನ್ನಾಗಿಡುವ ಕುರಿತು ಸಾರ್ವಕಾಲಿಕವೂ, ಸಾರ್ವಜನೀನವೂ ಆದ ಮಾರ್ಗವನ್ನು ಹೇಳಿದೆ.

ಒಟ್ಟಿನಲ್ಲಿ ಸಮಗ್ರ ಸಂಸ್ಕೃತ ಸಾಹಿತ್ಯ ನಮ್ಮ ವ್ಯಕ್ತಿತ್ವವನ್ನು ಬೆಳೆಸಿ ಕೊಳ್ಳಲು ಬೇಕಾದ ಮನೋಬಲ, ಬುದ್ಧಿಬಲ, ಶರೀರಬಲ, ಆತ್ಮಬಲಗಳನ್ನು ಒದಗಿಸಿ ಕೊಡುತ್ತದೆ. ಮನುಷ್ಯರಾದ ನಾವು ”ಉದ್ಧರೇದಾತ್ಮನಾತ್ಮಾನಮ್.” ಎಂಬಂತೆ ನಮ್ಮ ಬಾಳಿಗೆ ನಾವೇ ಶಿಲ್ಪಿಗಳು. ಎಂದರಿತು, ಸಂಸ್ಕೃತವನ್ನಾಶ್ರಯಿಸಿ, ನಮ್ಮ ವ್ಯಕ್ತಿತ್ವವನ್ನು ನಾವು ರೂಪಿಸಿ ಕೊಳ್ಳೋಣ. 

ಸಂಗ್ರಾಹಕಃ
ಪರಮೇಶ್ವರ ಪುಟ್ಟನ್ಮನೆ

Monday, September 28, 2015

Panchagavyam!



“ಪಂಚಗವ್ಯ ವಿಧಾನ”

ಗೋಮೂತ್ರಂ ಗೋಮಯಂ ಕ್ಷೀರಂ ದಧಿ ಸರ್ಪಿಃ ಕುಶೋದಕಮ್ |

ಪಂಚಗವ್ಯಮಿತಿ ಪ್ರೋಕ್ತಂ ಸರ್ವಪಾತಕನಾಶನಮ್ ||

ಪಂಚಗವ್ಯ ಪ್ರಮಾಣ ಕೋಷ್ಠಕ

ಗವ್ಯ ಎಂದರೆ ಹಸುವಿಗೆ ಸಂಬಂಧಿಸಿದುದು, ಪಂಚ ಎಂದರೆ ಐದು. ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ. ಈ ಐದು ವಸ್ತುಗಳನ್ನು ಸೇರಿಸಿದಾಗ ಉಂಟಾಗುವುದೇ ಪಂಚಗವ್ಯ. ಹಸುವಿನ ಹಾಲು ಬುದ್ಧಿಯನ್ನು ವರ್ಧಿಸುತ್ತದೆ. ಮೊಸರು ಬಲವರ್ಧಕ. ತುಪ್ಪದ ಬಳಕೆಯಿಂದ ದೇಹಕಾಂತಿ ಹೆಚ್ಚುತ್ತದೆ. ಗೋಮೂತ್ರ ಚೈತನ್ಯದಾಯಕ. ಗೋಮಯ ಕ್ರಿಮಿನಾಶಕ. ಹೀಗೆ ಮಾನವನ ಉತ್ತರೋತ್ತರ ಅಭಿವೃದ್ಧಿಗೆ ಕಾರಣವಾದ ಗೋವಿನ ಉತ್ಪನ್ನವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಒಟ್ಟುಗೂಡಿಸಿ ಪಂಚಗವ್ಯವನ್ನು ತಯಾರಿಸಲಾಗುತ್ತದೆ.

೧) ಗೋಮೂತ್ರ

ಕಪಿಲೆ, ತಾಮ್ರವರ್ಣ, ಕರಿ ಮತ್ತು ಬಿಳುಪಿನ ಮಿಶ್ರವರ್ಣದ ಆಕಳಿನ ಮೂತ್ರ ಶ್ರೇಷ್ಠವಾದದ್ದು. ಬೆಳಿಗ್ಗೆ ಆಕಳು ಹೊಯ್ಯುವ ಮೊದಲ ಮೂತ್ರವಾದರೆ ಪ್ರಶಸ್ತ. ಈ ಮೂತ್ರವನ್ನು ನಾಲ್ಕು ಮಡಿಕೆ ಮಾಡಿದ ಶುದ್ಧ ಬಟ್ಟೆಯಿಂದ ಸೋಸಿ ಪಂಚಗವ್ಯಕ್ಕೆ ಬಳಸಬೇಕು.


೨) ಗೋಮಯ

ಕಪಿಲೆ, ಬಿಳಿ ಬಣ್ಣ, ಕರಿ ಮತ್ತು ಬಿಳುಪಿನ ಮಿಶ್ರವರ್ಣದ ಆಕಳಿನ ಸಗಣಿ ಶ್ರೇಷ್ಠವಾದದ್ದು. ಶುದ್ಧ ಸ್ಥಳದಲ್ಲಿರುವ ಮತ್ತು ಆಗ ತಾನೇ ಆಕಳಿನಿಂದ ಹೊರಬಂದ ಸಗಣಿ ಪ್ರಶಸ್ತ. ಈ ಸಗಣಿಯನ್ನು ಅದೇ ಪ್ರಮಾಣದ ಗೋಮೂತ್ರದೊಂದಿಗೆ ಬೆರೆಸಿ, (ನೀರಿನಲ್ಲಿ ಬೆರೆಸಿ) ನಾಲ್ಕು ಮಡಿಕೆ ಮಾಡಿದ ಶುದ್ಧ ಬಟ್ಟೆಯಿಂದ ಸೋಸಿ ಪಂಚಗವ್ಯಕ್ಕೆ ಬಳಸಬೇಕು.


೩) ಹಾಲು

ಕಪಿಲೆ, ಬಂಗಾರ ವರ್ಣದ ಆಕಳಿನ ಹಾಲು ಸಿಕ್ಕಿದರೆ ಉತ್ತಮ. ಹಾಲು ಕರೆದು ಅರ್ಧ ಘಂಟೆಯ ಒಳಗೆ ಅದನ್ನು ಸೋಸಿ ಬಳಸುವುದು ಪ್ರಶಸ್ತ. ಇಂಥ ಹಾಲನ್ನು ಮೇಲ್ಕಂಡ ಆಯ್ದ ಪ್ರಮಾಣಗಳಲ್ಲಿ ಪಂಚಗವ್ಯಕ್ಕೆ ಬೆರೆಸಬೇಕು.


೪) ತುಪ್ಪ

ಕಪಿಲೆ, ಕರೀ ಬಣ್ಣದ, ಕೆಂಪು ವರ್ಣದ ಆಕಳಿನ ಹಾಲಿನಿಂದ ಮಾಡಿದ ತುಪ್ಪ ಶ್ರೇಷ್ಠ. ನೀರು ಬೆರೆಸದ ಹಾಲಿನಿಂದ ಮೊಸರು ಮಾಡಿ, ಆ ಮೊಸರನ್ನು ಕಡೆದು ಬೆಣ್ಣೆ ತೆಗೆದು ಅಂದೇ ತಯಾರಿಸಿದ ತುಪ್ಪ ಪ್ರಶಸ್ತ. ಮೇಲ್ಕಂಡ ಪ್ರಮಾಣಗಳಲ್ಲಿ ಪಂಚಗವ್ಯಕ್ಕೆ ತುಪ್ಪವನ್ನು ಬಳಸಬೇಕು.


೫) ಮೊಸರು

ಕಪಿಲೆ, ನೀಲಿ ಬಣ್ಣದ, ಬಿಳೀ ವರ್ಣದ ಆಕಳಿನಿಂದ ಪಡೆದರೆ ಶ್ರೇಷ್ಠವೆನಿಸುತ್ತದೆ. ಆಕಳ ಹಾಲಿಗೆ ನೀರು ಬೆರೆಸದೆ ಶುದ್ಧವಾಗಿ ಮಾಡಿದ ಮೊಸರು ಪ್ರಶಸ್ತ. ಈ ಮೊಸರನ್ನು ಆಯಾ ಪ್ರಮಾಣಗಳಲ್ಲಿ ಪಂಚಗವ್ಯಕ್ಕೆ ಬಳಸುವುದು.

೬) ದರ್ಭೆ ನೀರು

ಹಸಿದರ್ಭೆಯನ್ನು ಅರೆದು, ನೀರು ಬೆರೆಸಿ, ಸೋಸುವುದು. ಅಥವಾ ಶುದ್ಧವಾದ ಒಣಗಿದ ದರ್ಭೆಯನ್ನು ನೀರಲ್ಲಿ ನೆನೆಸಿ, ಅದನ್ನು ಪಂಚಗವ್ಯಕ್ಕೆ ಮೇಲ್ಕಂಡ ಯಾವುದಾದರೊಂದು ಪ್ರಮಾಣದಲ್ಲಿ ಬೆರೆಸುವುದು ಯುಕ್ತವೆನಿಸುತ್ತದೆ. ಈ ದರ್ಭೆ ನೀರನ್ನು ಬಳಸಲೇ ಬೇಕೆಂಬ ಅನಿವಾರ್ಯತೆ ಇಲ್ಲ. ಸಿಗುವಂತಿದ್ದರೆ ಬಳಸುವುದು ಉತ್ತಮ.

ಹೀಗೆ ಪಂಚಗವ್ಯವನ್ನು ತಯಾರಿಸಿ, ಕನಿಷ್ಠ ಹತ್ತು ಸಲ ಗಾಯತ್ರೀ ಮಂತ್ರದಿಂದ ಅಭಿಮಂತ್ರಿಸಿ, “ಓಂ” ಎಂದು ಪ್ರಣವ ಮಂತ್ರವನ್ನು ಹೇಳಿ, ಒಬ್ಬನು (೫೦ ರಿಂದ ೧೦೦ಕಿಲೋ ಭಾರವುಳ್ಳವನು) ಅರ್ಧ ಲೋಟದವರೆಗೆ (೫೦ ರಿಂದ ೧೦೦ ಎಂ. ಎಲ್. ವರೆಗೆ) ತೆಗೆದು ಕೊಳ್ಳಬಹುದು.

ಯತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ |
ಪ್ರಾಶನಾತ್ಪಂಚಗವ್ಯಸ್ಯ ದಹತ್ವಗ್ನಿರಿವೇಂಧನಮ್ ||

ಇಂಥ ಪಂಚಗವ್ಯವನ್ನು ೧೫, ೩೦ ಅಥವಾ ೪೫ ದಿನಗಳವರೆಗೆ ಸೇವಿಸುವುದರಿಂದ ಅವನಿಗೆ ಚರ್ಮವ್ಯಾಧಿಗಳು, ಅಸ್ಥಿಗತ ದೋಷಗಳು ಇದ್ದರೆ ಅವು ನಿಃಶೇಷವಾಗಿ ಪರಿಹಾರವಾಗುವವು. ಹೆಚ್ಚಾಗಿ ಕ್ರಿಮಿ ಪೀಡಿತರು, ಮೃತಗರ್ಭರು, ವಂಧ್ಯೆಯರು, ಚರ್ಮರೋಗಿಗಳು, ಅಸ್ಥಿವಾತ ರೋಗಿಗಳು ಇದನ್ನು ಕ್ರಮಬದ್ಧವಾಗಿ ಸೇವಿಸಿ ಗುಣಮುಖರಾಗಿದ್ದಾರೆ. ಒಟ್ಟಿನಲ್ಲಿ ಪಂಚಗವ್ಯ ಸರ್ವಪಾಪ ನಾಶಕವೂ, ರೋಗ ನಿವಾರಕವೂ, ಯಶಃ ಪ್ರದಾಯಕವೂ ಆಗಿದೆ.

ಸಂಗ್ರಾಹಕಃ

ಪರಮೇಶ್ವರ ಪುಟ್ಟನಮನೆ

 ಪಾಪು!


ಪಂಚಗವ್ಯ ಪ್ರಮಾಣಗಳಿಗೆ ನಾನು ಉಪಯೋಗಿಸಿದ ಆಕರ ಶ್ಲೋಕಗಳು...


೧) ಆಯುರ್ವೇದವಿಷಯದಲ್ಲಿ ಶಿರಸಿಯ ಪ್ರಸಿದ್ಧವೈದ್ಯರಾಗಿದ್ದ ಏ. ಎನ್. ಪಟವರ್ಧನರು ಸೂಚಿಸಿದ ಪ್ರಮಾಣವನ್ನು ಇಲ್ಲಿ ನಿರೂಪಿಸಿದ್ದೇನೆ.


೨) ಪ್ರಸ್ಥಪಾದಂ ಘೃತಂ ಪ್ರೋಕ್ತಂ ಗೋಮೂತ್ರಂ ದ್ವಿಗುಣಂ ಭವೇತ್ | ಗೋಮಯಂ ಕುಡಪಂ ಪ್ರೋಕ್ತಂ ದಧಿ ಪ್ರಸ್ಥಸಮನ್ವಿತಮ್ || ಕ್ಷೀರಂ ಪ್ರಸ್ಥದ್ವಯಂ ಪ್ರೋಕ್ತಮ್ ............. || ಭೊಧಾಯನ ಸೂತ್ರೇ ||


೩) ಗೋಮೂತ್ರಂ ದ್ವಿಗುಣಂ ಕ್ಷೀರಾತ್ಕ್ಷೀರಾರ್ಧಂ ದಧಿ ಕಥ್ಯತೇ |  
ತದರ್ಧಂ ಗೋಮಯಂ ಜ್ಞೇಯಂ ಗೋಮಯಾರ್ಧಂ ಘೃತಂ ಭವೇತ್ || ವಾತುಲಾಗಮೇ ||


೪) ಗೋಮೂತ್ರಂ ತು ಪಲಂ ಗ್ರಾಹ್ಯಮಂಗುಷ್ಠಾರ್ಧಂ ತು ಗೋಮಯಮ್ |  
ಪಯಸ್ತ್ರಿಪಲಮೇವಂ ಸ್ಯಾದ್ದಧಿ ದ್ವಿಪಲಮುಚ್ಯತೇ ||

ಘೃತಂ ಕುಶೋದಕಂ ಚೈವ ಪಲೇನೈಕೇನ ಸಮ್ಮಿತಮ್ | ಪ್ರಯೋಗಕಾರಿಕಾಯಾಮ್ ||


೫) ಗೋಮೂತ್ರಭಾಗಸ್ತಸ್ಯಾರ್ಧಂ ಶಕೃತ್ಕ್ಷೀರಸ್ಯ ಚ ತ್ರಯಮ್ | 
ದ್ವಯಂ ದಧ್ನೋ ಘೃತಸ್ಯೈಕಮೇಕಶ್ಚ ಕುಶವಾರಿಜಃ || ಸ್ಕಾಂದಪುರಾಣೇ ||

papu!