Friday, May 28, 2021

ಕರೋನಾಡಳಿತದಲ್ಲಿ ಶ್ರಾದ್ಧ!

ಆಸ್ತಿಕರು ಕರೋನಾದಿಂದಾಗಿ ನಿಜವಾಗಿಯೂ ಧರ್ಮಸಂಕಟದಲ್ಲಿದ್ದಾರೆ. ವಿಶೇಷವಾಗಿ ಹಿರಿಯರ ಶ್ರಾದ್ಧವನ್ನು ಮಾಡುವುದು ಹೇಗೆ? ಎಂಬ ಸಂದಿಗ್ಧದಲ್ಲಿದ್ದಾರೆ.  ಶ್ರಾದ್ಧ ತಾನೇ ? ಬಿಟ್ಟರಾಯಿತು.  ಅದರಿಂದೇನು? ಎಂದು ತಟಸ್ಥರಾಗಲು ಅಂತಃಕರಣವು ಸಿದ್ಧವಾಗಿಲ್ಲ!  ವಿಧಿಯುಕ್ತವಾಗಿ ಶ್ರಾದ್ಧವನ್ನು ಮಾಡಲು ವಿಪ್ರರೇ ದುರ್ಲಭರಾಗಿದ್ದಾರೆ. ಕರೋನಾದ ಆಡಳಿತದಲ್ಲಿ ವಿಪ್ರರು ಉಳಿದವರಂತೆ ಮನೆಯಿಂದ ಹೊರಬರಲಾರರು.  ಕರೋನಾಕ್ಕೆ ವೈದಿಕರು-ಅವೈದಿಕರೆಂಬ ಭೇದಭಾವವಿಲ್ಲವಷ್ಟೇ? ಯಾರನ್ನಾದರೂ ಆಲಂಗಿಸುತ್ತದೆ. ಆ ವಿಷಯದಲ್ಲಿ ಕರೋನಾ ನಿಷ್ಪಕ್ಷಪಾತಿಯಾಗಿದೆ. ಆದ್ದರಿಂದ ಏಕಾಂತವೇ ತಾರಕ. ಲೋಕಾಂತ ಮಾರಕ. ಸಾಮಾಜಿಕ ಅಂತರ ಇಂದಿನ ಅನಿವಾರ್ಯತೆ.  ಇಂತಹ ಪರಿಸ್ಥಿಯಲ್ಲಿ ಶ್ರಾದ್ಧಾಚರಣೆ ಹೇಗೆ?

 

ಶ್ರಾದ್ಧಕ್ಕೆ ಮೂಲಭೂತವಾಗಿ ಬೇಕಾದದ್ದು ಶ್ರದ್ಧೆ. ಸಾಮಗ್ರಿಗಳೆಲ್ಲ ಇದ್ದು ಶ್ರದ್ಧೆ ಇಲ್ಲದಿದ್ದರೆ ಅದು ಶ್ರಾದ್ಧಾಭಾಸ. ಆದ್ದರಿಂದ ಧರ್ಮಶಾಸ್ತ್ರದಲ್ಲಿ ಇಂಥ ಅಪರಿಹಾರ್ಯ ಸಂದರ್ಭದಲ್ಲಿ ಶ್ರಾದ್ಧಾಚರಣೆಯ ಪರ್ಯಾಯಮಾರ್ಗವನ್ನು ತಿಳಿಸಿದ್ದಾರೆ. ಶಾಸ್ತ್ರಕಾರರ ಮುನ್ನೋಟ ನಮ್ಮನ್ನು ಮೂಕರನ್ನಾಗಿಸುತ್ತದೆ. ಕರ್ಮಕಾಂಡದ ಗಂಧಗಾಳಿಯಿಲ್ಲದವರೂ ನೆರವೇರಿಸಬಹುದಾದ ಸರಳ ಹಾಗೂ ಅರ್ಥಪೂರ್ಣವಾದ ಪರ್ಯಾಯಗಳಿವು. 

 

                         I.      ವಿಪ್ರಸ್ಯ ಅನ್ನಾದೇರ್ವಾ ಅಭಾವೇ ಯಥಾಶಕ್ತಿ ಅನ್ನಮುದ್ಧೃತ್ಯ ಷೋಢಾ ವಿಭಜ್ಯ

           1)     ಅಸ್ಮತ್ ಪಿತೃಭ್ಯಃ ಇದಮನ್ನಂ ಸ್ವಧಾ ನ ಮಮ |

           2)     ಅಸ್ಮತ್ ಪಿತಾಮಹೇಭ್ಯಃ ಇದಮನ್ನಂ ಸ್ವಧಾ ನ ಮಮ |

           3)     ಅಸ್ಮತ್ ಪ್ರಪಿತಾಮಹೇಭ್ಯಃ ಇದಮನ್ನಂ ಸ್ವಧಾ ನ ಮಮ |

           4)     ಅಸ್ಮತ್ ಮಾತೃಭ್ಯಃ ಇದಮನ್ನಂ ಸ್ವಧಾ ನ ಮಮ |

           5)     ಅಸ್ಮತ್ ಪಿತಾಮಹೀಭ್ಯಃ ಇದಮನ್ನಂ ಸ್ವಧಾ ನ ಮಮ |

6)     ಅಸ್ಮತ್ ಪ್ರಪಿತಾಮಹೀಭ್ಯಃ ಇದಮನ್ನಂ ಸ್ವಧಾ ನ ಮಮ | ಇತಿ ತ್ಯಜೇತ್ | ತದನ್ನಂ ವಿಪ್ರಾಯ, ಗೋಭ್ಯೋ ವಾ ದೇಯಮ್ | ಜಲಾದೌ ವಾ ತ್ಯಾಜ್ಯಮ್ |

ಶ್ರಾದ್ಧನಿರ್ವಹಿಸುವ ವಿಪ್ರರೇ ದೊರೆಯದಿದ್ದಾಗ ಪಾತ್ರೆಯಲ್ಲಿರುವ ಅನ್ನವನ್ನು ಸಾಧ್ಯವಿದ್ದಷ್ಟು ಎತ್ತಿಕೊಳ್ಳಬೇಕು, ಅದನ್ನು ಸಮನಾಗಿ ಆರು ಭಾಗಮಾಡಿ ವಿಂಗಡಿಸಬೇಕು. ವಿಂಗಡಿಸಿದ ಈ ಅನ್ನವನ್ನು ಕ್ರಮವಾಗಿ 1. ತಂದೆಗೆ 2. ಅಜ್ಜನಿಗೆ  3. ಮುತ್ತಜ್ಜನಿಗೆ  4. ತಾಯಿಗೆ 5. ಅಜ್ಜಿಗೆ  6. ಮುತ್ತಜ್ಜಿಗೆ ಎಂದು ಸಮರ್ಪಿಸಬೇಕು.  ಹೀಗೆ ಪಿತೃಗಳಿಗೆ ಮೀಸಲಿಟ್ಟ ಅನ್ನವನ್ನು ಗೋವುಗಳಿಗೆ ಗ್ರಾಸರೂಪವಾಗಿ ನೀಡಬೇಕು. ನಮ್ಮೂರಿನಲ್ಲಿ ನಾವು ಯಾರೂ ಗೋವನ್ನು ಸಾಕಿಲ್ಲ! ಎನ್ನುವವರಿದ್ದರೆ ಅವರು ಪಿತೃಗಳಿಗೆ ಸಮರ್ಪಿಸಿದ ಅನ್ನವನ್ನು ಜಲದಲ್ಲಿ ಬಿಡಬೇಕು.  ಈ ಆರು ಸಾಲು ಮಂತ್ರವನ್ನು ಹೇಳುವುದು ಅಸಾಧ್ಯವೆನ್ನುವವರು ಏನು ಮಾಡಬೇಕು? ಅದಕ್ಕೂ ಒಂದು ಪರ್ಯಾಯವಿದೆ. 

 II    ಯದ್ವಾ ಶ್ರಾದ್ಧದಿನೇ ಪ್ರಾಪ್ತೇ ಭವೇನ್ನಿರಶನಃ ಪುಮಾನ್ |

   ಶ್ರಾದ್ಧದ ದಿನ ಕರ್ತೃವು ಉಪವಾಸವಿದ್ದರಾಯಿತು. ಶ್ರಾದ್ಧಮಾಡಿದಂತೆಯೇ ಆಗುವುದು!  ಆರೋಗ್ಯದ ದೃಷ್ಟಿಯಿಂದ ಉಪವಾಸ ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡೋಣ ?               ಅದಕ್ಕೂ ಒಂದು ಪರ್ಯಾಯವಿದೆ.

 III   ತೃಣಾನಿ ವಾ ಗವೇ ದದ್ಯಾತ್ |       

      ಹಸುಗಳಿಗೆ ಹುಲ್ಲನ್ನು ನೀಡಿ.

ಹಸುದೊರೆಯುವುದೇ ದುರ್ಲಭವೆಂದೆವಲ್ಲ? ಆಗೇನು ಗತಿ ? ಅದಕ್ಕೂ ಇದೆ ಪರ್ಯಾಯ.

                      IV.      ತೃಣಭಾರಂ ದಹೇತ್ |

      ಒಂದು ಹೊರೆ ಹುಲ್ಲನ್ನು ಸುಡಬೇಕು. 

ಇನ್ನೇನು ಹೇಳೋಣ ಇದೊಂದು ಅಂತಿಮ ಪರ್ಯಾಯ.

   V.        ಸರ್ವಾಭಾವೇ ವನಂ ಗತ್ವಾ ಊಧ್ರ್ವಬಾಹುಃ ಕಕ್ಷಂ ದರ್ಶಯನ್ನಿದಂ  ಪಠೇತ್ |

    ನ ಮೇಸ್ತಿ ವಿತ್ತಂ ನ ಧನಂ ನ ಚಾನ್ಯತ್-ಶ್ರಾದ್ಧೋಪಯೋಗಿ ಸ್ವಪಿತೄನ್ನತೋಸ್ಮಿ  |

      ತೃಪ್ಯಂತು ಭುಕ್ತ್ವಾ ಪಿತರೌಯೈತೌ ಭುಜೌ ಕೃತೌ ವರ್ತ್ಮನಿ ಮಾರುತಸ್ಯ  ||     

ಏನೂ ಇಲ್ಲದ ಅಸಹಾಯಕ ಸ್ಥಿತಿಯಲ್ಲಿ ಕಾಡಿಗೆ ಹೋಗಿ ಎರಡೂ ಕೈಯನ್ನು ಮೇಲೆತ್ತಿ ಈ ಶ್ಲೋಕವನ್ನು ಹೇಳಿ. ಶ್ಲೋಕ ಹೇಳಲು ಬಾರದಿದ್ದರೆ ಅದರ ಅರ್ಥವನ್ನು ಅನುಸಂಧಾನ ಮಾಡಿಕೊಳ್ಳಿ. ನನ್ನಲ್ಲಿ ಶ್ರಾದ್ಧಮಾಡಲು ಬೇಕಾದ ಸಂಪತ್ತಿಲ್ಲ, ಹಣವಿಲ್ಲ, ಮತ್ತೇನೂ ಇಲ್ಲ. ಪಿತೃಗಳಿಗೆ ನಮಿಸುತ್ತೇನೆ. ನನ್ನ ಈ ಎರಡೂ ಬಾಹುಗಳನ್ನು ಅಸಹಾಯಕತೆಯಿಂದ ಎತ್ತಿ ನಿಂತಿದ್ದೇನೆ. ಇದರಿಂದ ಪಿತೃಗಳು ತೃಪ್ತರಾಗಲಿ. ಹೀಗೆ ಧರ್ಮಶಾಸ್ತ್ರವು ಉದಾರವಾಗಿ ಅನೇಕ ಪರ್ಯಾಯಗಳನ್ನು ಸೂಚಿಸಿದೆ. ಇವೆಲ್ಲ ಧರ್ಮಸಿಂಧು ಗ್ರಂಥದ ಮೂರನೆಯ ಪರಿಚ್ಛೇದದ ಉತ್ತರಾರ್ಧದಲ್ಲಿ ಉಲ್ಲಿಖಿತವಾದ ಶ್ರಾದ್ಧದ ಪರ್ಯಾಯ ವಿಧಾನಗಳು. ಆದ್ದರಿಂದ ಆಸ್ತಿಕರು ಕರೋನಾಡಳಿತಕ್ಕೂ ಜಗ್ಗದೇ ಧರ್ಮಮಾರ್ಗದಲ್ಲಿ ನಡೆಯಲು ಸಾಧ್ಯ.

 

೨೮ ಮೇ ೨೦೨೧

ಶುಕ್ರವಾರ                                                 ವಿದ್ವಾನ್ ಗಂಗಾಧರ ಭಟ್ಟ ಅಗ್ಗೆರೆ

(ಶ್ರೀಯುತರು ನಮ್ಮ ವಿದ್ಯಾಗುರುಗಳು, ಧೀಮಂತರು, ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿದ ಸಹೃದಯ ವಿದ್ವಾಂಸರು.) 

ಪರಮೇಶ್ವರ ಪುಟ್ಟನ್ಮನೆ

Tuesday, May 25, 2021

Apara sanskara sandarbha

ಯಜ್ಞಸಂಸ್ಕೃತಿಯ ಸದಸ್ಯರಾದ ನಮಗೆ ಅಪರ ಸಂಸ್ಕಾರ ಮಾಡುವಾಗ ಅಗ್ನಿ ಮತ್ತು ಸೋಮರು ಬೇಕು! ಅಗ್ನಿ ಆಹುತಿ ತೆಗೆದು ಕೊಂಡರೆ ಸೋಮ ಆಹುತಿಯಾಗುವ ತತ್ವವಾಗಿದೆ. ಇವೆರಡನ್ನೂ ಒಳಗೊಂಡಿದ್ದು ನಮ್ಮ ಯಜ್ಞಪ್ರಕ್ರಿಯೆ. ಪ್ರಕೃತ ಶವದಹನ ಸಂದರ್ಭಕ್ಕೆ ಬಂದಾಗ ಶವ ದೊರೆತು ಮಾಡುವ ಸಂಸ್ಕಾರ ಮತ್ತು ಶವ ದೊರೆಯದೇ ಮಾಡುವ ಸಂಸ್ಕಾರ ಎಂಬ ಎರಡು ವಿಭಾಗಗಳು ಸ್ಪಷ್ಟವಾಗಿವೆ.

ಮೊದಲ ವಿಭಾಗದಲ್ಲಿ ದೊರೆತ ಶವ ಹವಿಸ್ಸಾಗಲು ಯೋಗ್ಯವೇ? ಅಯೋಗ್ಯವೇ? ಎಂಬ ಎರಡು ಕವಲುಗಳಿವೆ. ಅಯೋಗ್ಯವಾದ ರೋಗರುಜಿನ ಪೀಡಿತವಾದ ಶವವನ್ನು ಯೋಗ್ಯಗೊಳಿಸಿ, ಅಂತ್ಯೇಷ್ಟಿ ಹೋಮ ಸಂಪಾದಿಸಬೇಕು. ಅದಕ್ಕೆ ಸ್ಮೃತಿಕಾರರು ಹೇಳಿದ ಎಣ್ಣೆಯಲ್ಲಿಡುವುದು ಅಥವಾ ಮಧು ಆಜ್ಯದಿಂದ ಆಯಾ ಅಂಗಗಳನ್ನು ತೊಳೆಯುವುದು ಇತ್ಯಾದಿಯಾಗಿ ಕಂಡುಬರುತ್ತದೆ. ಇನ್ನು  ಬೋಧಾಯನರು ಹೇಳುವಂತೆ “ಅಥಾಸ್ಯ ದಕ್ಷಿಣಂ ಕುಕ್ಷಿಮಪಾವೃತ್ಯ ನಿಷ್ಪುರೀಷಂ ಕೃತ್ವಾ, ಅದ್ಭಿಃ ಪ್ರಕ್ಷಾಳ್ಯ,” ಎಂದು ಪ್ರತಿ ಶವವನ್ನೂ ಹೋಮಿಸುವ ಮೊದಲು ಮಲಚೀಲ ಬೇರ್ಪಡಿಸುವುದನ್ನು ನೋಡುತ್ತೇವೆ! ಈ ಎಲ್ಲ ಪ್ರಕ್ರಿಯೆಗಳಿಂದ ನಾವು ಬಹುದೂರ ಬಂದು ಶವದ ಕ್ಷೌರವೋ, ಉಗುರು ತೆಗೆಯುವುದೋ ಮಾಡಲಾಗದೆ; ಬಟ್ಟೆಗಳನ್ನೂ ಬೇರ್ಪಡಿಸಲಾಗದೇ ಹೋಮಿಸುವ ಹಂತಕ್ಕೆ ಬಂದಿದ್ದೇವೆ! ಬಹುಶಃ ಇನ್ನು ಮುಂದೆ ಶವವನ್ನು ಸಾಗಿಸಲು ತಳ್ಳುಗಾಡಿಯ ಅವಶ್ಯಕತೆ ಎದ್ದು ಕಾಣುತ್ತಿದೆ. ಹೀಗಿರುವಾಗ ಕಾಲಕಾಲಕ್ಕೆ ಬದಲಾಗುತ್ತಿರುವ ವ್ಯವಸ್ಥೆಯನ್ನು ಪರಿಶೀಲಿಸಿ, ಶವಸಂಸ್ಕಾರವನ್ನು ಮಾಡುವುದು ಅನಿವಾರ್ಯವಾಗಿದೆ. ಇನ್ನು ಎರಡನೆಯ ವಿಭಾಗದಂತೆ ಶವ-ಅಪ್ರಾಪ್ತವಾದಾಗ ಅಸ್ಥಿ ಸಂಸ್ಕಾರವೋ, ಶಾಖಾ ಸಂಸ್ಕಾರವೋ ನಮಗೆ ಅನಿವಾರ್ಯವಾಗಿರುತ್ತದೆ.

ಈ ಸಂದರ್ಭಕ್ಕೆ ವೇದದ “ಯೇ ಅಗ್ನಿದಗ್ಧಾ ಯೇ ಅನಗ್ನಿದಗ್ಧಾಃ – ಮಧ್ಯೇ ದಿವಃ ಸ್ವಧಯಾ ಮಾದಯಂತೇ | ” ಎಂಬ ಮಾತು ತುಂಬಾ ಅರ್ಥವತ್ತಾಗಿ ಕಾಣುತ್ತದೆ. ಆಚಾರ್ಯ ಸಾಯಣರುಯೇ ಪಿತರಃ ಅಗ್ನಿದಗ್ಧಾಃ ಅಗ್ನಿನಾ ಭಸ್ಮೀಕೃತಾಃ | ಶ್ಮಶಾನಂ ಪ್ರಾಪ್ತಾಃ ಇತ್ಯರ್ಥಃ | ಯೇ ಚ ಪಿತರಃ ಅನಗ್ನಿದಗ್ಧಾಃ ಶ್ಮಶಾನಕರ್ಮ ನ ಪ್ರಾಪ್ತಾಃ” ಎಂದು ಅರ್ಥೈಸಿದ್ದಾರೆ. ಹೀಗೆ ಈ ಎರಡೂ ಪ್ರಕಾರದ ಪಿತೃಗಳು ನಾವು ನೀಡುವ ಸ್ವಧಾಕಾರದ ಹವಿಸ್ಸಿನಿಂದ ತೃಪ್ತಿಗೊಳ್ಳಲಿ.

ಪ್ರಕೃತ ಪರಿಸ್ಥಿತಿಯಲ್ಲಿ ಅಪರ ಸಂಸ್ಕಾರಕುರಿತು ಎರಡು ಮುಖ್ಯ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ.

  1.     ಲೊಕ್ ಡೌನ್ ಮತ್ತು ಸೀಲ್ ಡೌನ್ ಆದ ಸಂದರ್ಭದಲ್ಲಿ ಅಪರ ಸಂಸ್ಕಾರಗಳ ಪರಿ  ಹೇಗೆ?
  2.    ಅಪರ ಸಂಸ್ಕಾರ ಮಾಡುವ ಅಧಿಕಾರಿಗೇ ಕರೋನಾ ಜ್ವರ ಅಥವಾ ೧೪ ದಿನಗಳ ಸ್ವನಿಯಂತ್ರಣ ವ್ರತವಿದ್ದಾಗ ನಿರ್ವಹಿಸುವುದು ಹೇಗೆ?

ನಮ್ಮ ಬದುಕಿಗೆ ಶಿಸ್ತು ಬದ್ಧತೆ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಕಾನೂನು ಕಾಪಿಡುತ್ತದೆ. ಹಾಗಿರುವಾಗ ಅದನ್ನು ಪಾಲಿಸಬೇಕಾದ್ದು ನಮ್ಮ ಪ್ರಜಾಪ್ರಭುತ್ವದ ರಾಜಧರ್ಮ.  ಹೀಗಿರುವಾಗ ಮೊದಲಿನ ಸಮಸ್ಯೆಯನ್ನು ನೋಡಿದರೆ ಅದನ್ನು ಎರಡು ರೀತಿಯಲ್ಲಿ ನಾವು ಬಗೆಹರಿಸಿ ಕೊಳ್ಳಬಹುದು.

   1.      ಮನೆಯಲ್ಲಿ ಅಥವಾ ಸಮೀಪದಲ್ಲಿ ವೈದಿಕ ಅಭ್ಯಾಸಿಗಳಿದ್ದಾಗ ಶಾಂತವಾಗಿ ಯಾವುದೇ ಗೌಜು ಗಲಾಟೆಗಳಾಗದಂತೆ ದಶಗಾತ್ರವಿಧಿಯನ್ನೂ ಉಳಿದಂತೆ ಸಪಿಂಡಿಕರಣಾಂತವಾಗಿ ಎಲ್ಲ ಸಂಸ್ಕಾರಗಳನ್ನೂ ನಿರ್ವಹಿಸಲು ತೊಂದರೆಯಿಲ್ಲ. ಇವಿಷ್ಟಕ್ಕೆ ಬಹು ಸಂಖ್ಯೆಯಲ್ಲಿ ವೈದಿಕರೇನೂ ಬೇಕಾಗುವುದಿಲ್ಲ.

   2.      ಇನ್ನು ವೈದಿಕರು ದೂರದಿಂದ ಬರಬೇಕಾದಾಗ ಕಾನೂನು ಕ್ರಮವನ್ನನುಸರಿಸಿ, ಈ .....ಡೌನ್-ಗಳು ಮುಗಿದ ಮೇಲೆ ದಿನಗಳನ್ನು ಎಣಿಸದೇ ಶೀಘ್ರಾತಿಶೀಘ್ರವಾಗಿ ಅಸ್ಥಿಯನ್ನು ಆಶ್ರಯಿಸಿ ಸಂಸ್ಕಾರ ಮಾಡಬಹುದಾಗಿದೆ.

“ನಾಶಕ್ಯೇ ಧರ್ಮಚೋದನಾ” ಅಸಾಧ್ಯವಾದದ್ದನ್ನು ಯಾವತ್ತೂ ನಮ್ಮ ಧರ್ಮಶಾಸ್ತ್ರಗಳು ಹೇಳಿಯೇ ಇಲ್ಲ! ಏಕೆಂದರೆ ಧರ್ಮಾಚರಣೆ ಸರ್ಕಸ್ ಅಲ್ಲವಲ್ಲ! ಅಧಿಕಾರಿ ಯೋಗ್ಯನಾಗಿರುವಾಗ ಎಲ್ಲ ಸಂಸ್ಕಾರಗಳೂ ಅರ್ಥವತ್ತಾಗಿರುತ್ತವೆ. ಹೀಗಿರುವಾಗ ಆರೋಗ್ಯ ಮತ್ತು ದೇಹಧರ್ಮವನ್ನು ನಾವು ಪಾಲಿಸಲೇ ಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಎರಡನೇ ಪ್ರಶ್ನೆಗೂ ಎರಡು ರೀತಿ ಪರಿಹಾರವನ್ನು ಕಂಡು ಕೊಳ್ಳಬಹುದು.

   1.      ಒಂದು ವೇಳೆ ಹನ್ನೊಂದನೆಯ ದಿನಕ್ಕೆ ಮುಖ್ಯ ಕರ್ತನು ಸ್ವನಿಯಂತ್ರಣದಿಂದ ಅಥವಾ ಪ್ರಾಪ್ತ ಜ್ವರಬಾಧೆಯಿಂದ ಹೊರಬರುವುದು ಖಚಿತವಾಗಿದ್ದರೆ, “ಕಾಮ್ಯೇ ಪ್ರತಿನಿಧಿರ್ನಾಸ್ತಿ ನಿತ್ಯನೈಮಿತ್ತಿಕೇ ಹಿ ಸಃ” ಎಂಬ ಮಾಧವೀಯ ವಚನವನ್ನನುಸರಿಸಿ, ದಶಗಾತ್ರವಿಧಿಯನ್ನು ಕುಟುಂಬದ ಹತ್ತಿರದ ಅಧಿಕಾರಿಗೆ ವಹಿಸುವುದು ತದನಂತರ ಹನ್ನೊಂದನೇ ದಿನದ ಕಾರ್ಯಕ್ರಮಗಳಿಗೆ ತಾನೇ ಭಾಗಿಯಾಗಿ (ಪಾಥೇಯ ಧಾರಿಯಾಗಿ) ಅಪರಕರ್ಮ ಪೂರೈಸುವುದು.

   2.      ಹನ್ನೊಂದು ದಿನಗಳು ಕಳೆದರೂ ಮುಖ್ಯ ಕರ್ತನು ಅನುಪಲಬ್ಧನಾಗಲು, ಅವನು ಪೂರ್ಣಗುಣಮುಖನಾದ ಮೇಲೆ ಅಸ್ಥಿಯನ್ನು ಆಶ್ರಯಿಸಿ ದಶಗಾತ್ರವಿಧಿಯೇ ಮೊದಲಾದ ಯಾವತ್ತೂ ಔರ್ಧ್ವದೈಹಿಕಕರ್ಮಗಳನ್ನು ಪೂರೈಸುವುದು.

ಈ ಸಂದರ್ಭಗಳಲ್ಲಿ ಉಳಿದ ಎಲ್ಲ ಜ್ಞಾತಿಗಳಿಗೂ ೧೧ನೇ ದಿನ ಆಶೌಚದಿಂದ ಶುದ್ಧಿಯನ್ನೂ, ಕರ್ತೃ ಮತ್ತು ಆತನ ಮನೆಯವರಿಗೆ (ಸ್ವಕೀಯರಾದವರಿಗೆ) ಮತ್ತು ಅವನ ಅನ್ನ ಸೇವಿಸುತ್ತಿರುವವರಿಗೆ ಸಪಿಂಡೀಕರಣಾಂತ ಕರ್ಮದಿಂದ ಶುದ್ಧಿಯನ್ನೂ ಹೇಳುವುದು ಸಮ್ಮತವಾಗಿದೆಯಲ್ಲವೇ? ಇನ್ನು ಈ ಅಪರ ಸಂಸ್ಕಾರವನ್ನು ಆಯಾ ಮನೆಯ ಯಾವತ್ತೂ ಗೃಹಸ್ಥ ಅಧಿಕಾರಿಗಳ ಸಹಕಾರವನ್ನು ಪಡೆದು ಅತಿಯಾದ ವೈದಿಕ ಆಡಂಬರಗಳಿಲ್ಲದೇ ನಿರ್ವಹಿಸುವುದು ಉತ್ತಮವೆನಿಸುತ್ತದೆ.

ಪರಮೇಶ್ವರ ಪುಟ್ಟನ್ಮನೆ

Pashya-papu!

Monday, May 24, 2021

ಅಷ್ಟು ಕ್ರೂರಿನಾ ಕರೋನಾ?

ಜಗತ್ತು  ಕರೋನಾದ ತೆಕ್ಕೆಯಲ್ಲಿ ನರಳುತ್ತಿದೆ. ಭಾರತ ಇದಕ್ಕೆ ಹೊರತಾಗಿಲ್ಲ.  ಈ ಅಂಟುಜಾಡ್ಯ ಒಡ್ಡಿದ ಸವಾಲು ಆಡಳಿತಗಾರರ ಧೃತಿಯನ್ನು ಪರೀಕ್ಷಿಸುತ್ತಿದೆ.  ಜನತೆ ತಮ್ಮ ಹತ್ತಿರ ರೋಗ ಬರುವವರೆಗೂ ಅಲಕ್ಷಿಸುತ್ತಿದ್ದಾರೆ.  ಬಂದ ನಂತರ ಪ್ರತಿಕ್ರಿಯೆ ಅಸಾಧ್ಯವೆಂದು ಸರಕಾರದ ಮೊರೆಹೋಗಿದ್ದಾರೆ.  ವಿಶೇಷವಾಗಿ ಎರಡನೆಯ ಅಲೆಯಲ್ಲಿ ಎಲ್ಲರ ಊಹೆಯನ್ನೂ ಮೀರಿ ಕರೋನಾ ಅಬ್ಬರಿಸಿದೆ.  ಸಾವಿನ ಸುದ್ದಿ ನಿರಂತರ ಪ್ರಸಾರವಾಗುತ್ತಿದೆ.  ಚಿಕಿತ್ಸೆ ಅಸಹನೀಯವಾಗಿದೆ.  ಹಾಸಿಗೆಗಳು ದೊರೆಯುತ್ತಿಲ್ಲ.  ಪ್ರಾಣವಾಯು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ.  ಆಶಾಕಿರಣವಾದ ಚುಚ್ಚುಮದ್ದು ದುರ್ಲಭವಾಗಿದೆ. ಕೊನೆಯ ಆಸರೆಯಾದ ರೆಮ್ಡಿಸಿವರ್ ನಂಥ ಔಷಧಗಳು ದೊರೆಯುತ್ತಿಲ್ಲ. ಈ ನಡುವೆ ಹೇಗೋ ಚಿಕಿತ್ಸೆಪಡೆದು ಚಿಕಿತ್ಸಾಲಯದಿಂದ ಬಿಡುಗಡೆಯಾದವರು, ಚಿಕಿತ್ಸೆಯ ಬಳುವಳಿಯೆಂಬಂತೆ ಕಪ್ಪು-ಶಿಲೀಂದ್ರದಂಥ  ಕಾಯಿಲೆಗೆ ತುತ್ತಾಗುತ್ತಿದ್ದಾರೆ.  ಒಟ್ಟಿನಲ್ಲಿ ಬದುಕು ಬರ್ಬರವಾಗಿದೆ. 

 

ಇದಕ್ಕೆಲ್ಲ ಸರಕಾರ ಕಾರಣವೆಂದು ಆರೋಪಿಸುವ ಕಾಯಕ ದೊಡ್ಡದೇನಲ್ಲ. ಆದರೆ ಪರಿಹಾರಕ್ಕೆ ನಮ್ಮಲ್ಲಿ ಉಪಾಯವಿದೆಯೆಂಬುದನ್ನೂ ಸಾಬೀತುಪಡಿಸಲಾಗಿಲ್ಲ! ಆದ್ದರಿಂದ ಆಪಾದನೆ ಅರ್ಥಹೀನ.  ಈ ಮಧ್ಯದಲ್ಲಿ ವ್ಯವಹರಿಸುತ್ತಿರುವ ವಿಕೃತಮನಸ್ಸುಗಳು ನಾವು ಬದುಕುತ್ತಿರುವ ಕಾಲಘಟ್ಟದ ಕಳಂಕಗಳು.  ಹಾಸಿಗೆ ದೊರೆಯದಂತೆ ಬಚ್ಚಿಟ್ಟು, ದುಡ್ಡಿಗಾಗಿ ಬಿಚ್ಚಿಡುವ ಪಾಪಿಷ್ಟರು;  ಪ್ರಾಣವಾಯುವನ್ನು ವಾಮಮಾರ್ಗದಿಂದ ಒದಗಿಸಿ, ಹಣಸಂಪಾದಿಸುವ ಘಾತಕರು;  ಚುಚ್ಚುಮದ್ದನ್ನು ವಂಚಿಸಿ ನೀಡಿ, ಹಣಮಾಡುವ ವೈದ್ಯರು ಇವರೆಲ್ಲ ಮನುಷ್ಯರೇ ? ಅವರಿಗೆ ಆತ್ಮಸಾಕ್ಷಿ ಇಲ್ಲವೋ ? ಇಂಥವರ ಬಗ್ಗೆ ಯಾವ ಕನಿಕರವನ್ನೂ ತೋರದೇ ಕಠಿಣ ದಂಡನೆಯಾಗಬೇಕು. ಅವರು ಅಕ್ರಮವಾಗಿ ಸಂಪಾದಿಸಿದ ಸಂಪತ್ತೆಲ್ಲವನ್ನೂ ರಾಜ್ಯಕೋಶಕ್ಕೆ ಸೇರಿಸಬೇಕು. ಅವರಿಗಾದ ಶಿಕ್ಷೆಯನ್ನು ಸಾರ್ವಜನಿಕರು ತಿಳಿಯುವಂತಾಗಬೇಕು. ಅದರಿಂದಲಾದರೂ ಈ ಶನಿಸಂತಾನ ನಿಶ್ಶೇಷವಾಗಲಿ.

 

ಈ ವ್ಯಾಧಿಯು ನಮ್ಮ ಕೊರತೆಗಳನ್ನೆಲ್ಲ ಬಯಲುಮಾಡಿತು. ಸತ್ತವರ-ಸಂಸ್ಕಾರ ಮಾಡಲು ಸ್ಥಳನೀಡಲಾಗದ ದುರ್ಗತಿ ನಮ್ಮ ಕರ್ನಾಟಕಕ್ಕೆ ಬಂತು.  ಶವಗಳನ್ನು ದಹಿಸಲು ಸರತಿಸಾಲಿನಲ್ಲಿ ಕಾಯುವ ಸ್ಥಿತಿಯನ್ನು ನಾವ್ಯಾರೂ ನಿರೀಕ್ಷಿಸಿರಲಿಲ್ಲ. ಅಂತೂ ಕಂದಾಯ ಸಚಿವರು ಶವಸಂಸ್ಕಾರಕ್ಕೆ ಸ್ಥಳಾವಕಾಶ ಕಲ್ಪಿಸುವ ವ್ಯವಸ್ಥೆ ಮಾಡಿದರು.  ನಮ್ಮ ಕರ್ನಾಟಕದಲ್ಲಿ ಅನಾಥರೆಷ್ಟಿದ್ದಾರೆಂಬ ಸತ್ಯವನ್ನು ಈ ಘಟನೆ ಬೆತ್ತಲು ಗೊಳಿಸಿತು. ಸಾವಿರಕ್ಕೂ ಹೆಚ್ಚು ಶವಗಳನ್ನು ಸಂಸ್ಕಾರಮಾಡಿ ಮುಂದಿನ  ಚಿತಾಭಸ್ಮ ವಿಸರ್ಜನೆಗಾಗಿ ಸರಕಾರ ಕಾಯುತ್ತಿದೆ. ಯಾವ ಸಂಬಂಧಿಕರೂ ಬಂದಿಲ್ಲ! ಮುಂದೇನು? ಎಂಬ ’ದಿಗಿಲು’ ಸರ್ಕಾರದ್ದು.  ಅದಕ್ಕಾಗಿ ಸರಕಾರದವತಿಯಿಂದಲೇ “ಅಸ್ಥಿಪ್ರಕ್ಷೇಪ” ಮಾಡಬೇಕೆಂಬ ವಿಚಾರವನ್ನು ಕಂದಾಯ ಸಚಿವರು ವ್ಯಕ್ತಪಡಿಸಿದ್ದಾರೆ. 

 

ಒಬ್ಬ ವ್ಯಕ್ತಿಯ ಮೃತ್ಯುವಿನೊಂದಿಗೆ ಅವನು ಶೂನ್ಯನಾಗುವುದಿಲ್ಲ. ಅವನ ಯಾತ್ರೆ ಮುಂದುವರಿಯುತ್ತದೆ. ಇದು ಪುನರ್ಜನ್ಮಸಿದ್ಧಾಂತದ ಆಶಯ.  ಒಬ್ಬ ವ್ಯಕ್ತಿಯು ಮೃತನಾಗುತ್ತಲೇ ಅವನ ಎಲ್ಲ ಆಸೆಗಳು ನಾಶವಾಗುವುದಿಲ್ಲ.  ಆತ್ಮ ನಿರಂತರನಾದ್ದರಿಂದ ಆ ಆಸೆಗಳು ಪೂರ್ಣ ತೃಪ್ತವಾಗದೇ ಆತ್ಮನಲ್ಲಿ ಉಳಿಯುತ್ತವೆ. ಇಂಥ ಅತೃಪ್ತ ಆತ್ಮವನ್ನು ಪ್ರೇತ ಎಂದು ಪಾರಿಭಾಷಿಕವಾಗಿ ಸ್ಮೃತಿಗಳು ಗುರುತಿಸುತ್ತವೆ. ಆ ಆಸೆಗಳ-ತರ್ಪಣ ಶರೀರದ ಮೂಲಕವಾಗಬೇಕು. ಈಗ ಪಡೆದ ಶರೀರ ನಿಶ್ಚೇಷ್ಟಿತವಾಗಿದೆ. ಇನ್ನೊಂದು ಶರೀರ ರೂಪುಗೊಳ್ಳಬೇಕು.  ಅಲ್ಲಿಯವರೆಗೆ ಪಂಚಭೂತಾತ್ಮಕವಾದ ಕಣ್ಣಿಗೆ ಕಾಣುವ ಶವರೂಪದ ಶರೀರ, ಆತ್ಮನ ಸುಖ-ದುಃಖ ಭೋಗಕ್ಕೆ ಭಾಜನವಾಗದು.  ಆದ್ದರಿಂದಲೇ ಪಂಚತನ್ಮಾತ್ರಾತ್ಮಕವಾದ ಸೂಕ್ಷ್ಮಶರೀರವನ್ನು ಆತ್ಮನು ಅವಲಂಬಿಸುತ್ತಾನೆ.  ಇದನ್ನು ಕಾರಣಶರೀರವೆಂದು ಹೇಳುತ್ತಾರೆ.  ಮೃತವ್ಯಕ್ತಿಯ ಕರ್ಮದ ಆಧಾರದ ಮೇಲೆ ಉತ್ಪತ್ತಿಯಾಗುವ ಶರೀರ ಈ ಪಂಚತನ್ಮಾತ್ರಗಳನ್ನೇ ಅವಲಂಬಿಸಬೇಕು. ಅತೃಪ್ತಾತ್ಮಗಳ ಆಸೆಗಳು ತೃಪ್ತವಾಗಲು ಉತ್ತರಕ್ರಿಯಾರೂಪದ ಸಂಸ್ಕಾರಗಳನ್ನು ಮಾಡಬೇಕು.  ಇದು ಮೃತನ ದೃಷ್ಟಿಯಿಂದ ಸಂಸ್ಕಾರದ ಸಾಫಲ್ಯ.

 

ಪುತ್ರ, ಪೌತ್ರ, ಬಂಧು-ಬಾಂಧವರು ಆ ವ್ಯಕ್ತಿಯ ಒಡನಾಟದಲ್ಲಿದ್ದು ಒಂದಿಲ್ಲೊಂದು ಬಗೆಯಿಂದ ಉಪಕೃತರಾಗಿರುತ್ತಾರೆ.  ಆ ಋಣದಿಂದ ಮುಕ್ತರಾಗಲು ಇರುವ ಒಂದೇ ಒಂದು  ಅವಕಾಶ  ಉತ್ತರಕ್ರಿಯೆಯಲ್ಲಿ ಭಾಗಿಯಾಗುವುದು. ಆದ್ದರಿಂದ ಸುಭದ್ರ ಸಮಾಜದಲ್ಲಿ ಅನಾಥಶವಕ್ಕೆ ಆಸ್ಪದವೇ ಇರಬಾರದು.  ನಮ್ಮ ದೌರ್ಭಾಗ್ಯ, ಕರ್ನಾಟಕ ರಾಜ್ಯವೊಂದರಲ್ಲಿ ಬಹುಶಃ ಬೆಂಗಳೂರೊಂದರಲ್ಲಿ ಸಾವಿರ ಸಂಖ್ಯೆಗೂ ಮೀರಿದ ಅನಾಥಶವಗಳಿವೆ! ಎಂಬುದು ನಮ್ಮ ಅಭದ್ರ ಸಮಾಜದ ಅಭಿವ್ಯಕ್ತಿಯಾಗಿದೆ. ಮಾನ್ಯ ಕಂದಾಯಸಚಿವರಾದ ಶ್ರೀ ಆರ್. ಅಶೋಕರವರು ಮೃತರ ಚಿತಾಭಸ್ಮವನ್ನು ಪವಿತ್ರಜಲದಲ್ಲಿ ವಿಸರ್ಜಿಸುವ ಸಿದ್ಧತೆಯಲ್ಲಿದ್ದಾರೆ.  ಇದು ರಾಜಧರ್ಮ.  ಯಾರ ಮತದ ಬಲದಿಂದ ಆಯ್ಕೆಗೊಂಡು ಜನತೆಯ ಪ್ರತಿನಿಧಿಗಳಾಗಿರುವರೋ ಅವರ ಪ್ರಾತಿನಿಧ್ಯವನ್ನು ವಹಿಸುವುದು ವಿಹಿತವಾಗಿದೆ. ಮಕ್ಕಳಿಲ್ಲದವರಿಗೆ ಮತ್ತು ಮಕ್ಕಳಿದ್ದೂ ಕರ್ತವ್ಯಭ್ರಷ್ಟರಾಗಿ ಇಲ್ಲದಂತಾದವರಿಗೆ ಮಕ್ಕಳೇ ಆಗುವುದು ರಾಜನ ನಿಷ್ಠೆ.  ಹಾಗೆಯೇ ತಂದೆ ತಾಯಿಯಿಲ್ಲದ, ಇದ್ದೂ ಕರ್ತವ್ಯಭ್ರಷ್ಟರಾಗಿ ಇಲ್ಲದಂತಾದವರಿಗೆ ತಂದೆಯಾಗಿ ವ್ಯವಹರಿಸುವುದು ರಾಜನೀತಿ.  ಇದು ಭಾರತೀಯ ರಾಜನೀತಿಯ ಆದರ್ಶ.  ಈ ಆದರ್ಶವನ್ನು ಅನುಷ್ಠಾನಮಾಡಲು ಮುಂದಾಗಿರುವುದು ಪ್ರಶಂಸಾರ್ಹ.  ಆಕ್ಷೇಪಶೀಲರು ಇದನ್ನು ಆಕ್ಷೇಪಿಸುತ್ತಾರೆ.  ಅದು ಅವರ ಚಿತ್ತಮಲದ ಅಭಿವ್ಯಕ್ತಿ. ಅದನ್ನು ಆಘ್ರಾಣಿಸಬಾರದು. ಇಂಥ ಕೃತ್ಯಕ್ಕೆ ಸನಾತನಧರ್ಮಗ್ರಂಥಗಳ ಬೆಂಬಲವಿದೆ.  ಗರುಡಪುರಾಣದಲ್ಲಿ ಬಭ್ರುವಾಹನ ಎಂಬ ರಾಜನು ಇಂಥ ಅನಾಥಶವಗಳ ಉತ್ತರಕ್ರಿಯೆ ಮಾಡಿದ ಉಲ್ಲೇಖವಿದೆ.  ಕಾಡಿನಲ್ಲಿ ಕಂಡ ಪ್ರೇತದ ಧ್ವನಿಯಿದು. 

ಮಮ ವೈ ಸಂತತಿರ್ನಾಸ್ತಿ ನ ಸುಹೃನ್ನ ಚ ಬಾಂಧವಾಃ |

ನ ಚ ಮಿತ್ರಂ ಹಿ ಮೇ ತಾದೃಗ್ಯಃ ಕುರ್ಯಾದೌರ್ಧ್ವದೈಹಿಕಮ್ ||

ನನಗೆ ಸಂತಾನವಿಲ್ಲ. ಸಹೃದಯರಿಲ್ಲ. ಬಂಧುಗಳಿಲ್ಲ. ಗೆಳೆಯರಿಲ್ಲ.  ನನ್ನ ಉತ್ತರಕ್ರಿಯೆಯನ್ನು ಯಾರು ತಾನೇ ಮಾಡುತ್ತಾರೆ?

ಇದೇ ಪ್ರಶ್ನೆಯನ್ನು ಈಗಲೂ ಕೇಳುತ್ತಿದ್ದಾರೆ.  ಕಾಡಿನಲ್ಲಲ್ಲ, ನಡುನಾಡಿನಲ್ಲಿ - ಬೆಂಗಳೂರಿನಲ್ಲಿ. ಇದು ಒಂದು ಪ್ರೇತದ ಪ್ರಶ್ನೆಯಲ್ಲ. ಸಾವಿರಾರು  ಅನಾಥ ಪ್ರೇತಗಳ ಪ್ರಶ್ನೆ.  ಇವುಗಳನ್ನು ಕೇಳಿಸಿಕೊಂಡ ಸಹೃದಯನ ಪ್ರತಿಕ್ರಿಯೆಯನ್ನು  ಮಾನ್ಯ ಕಂದಾಯ ಸಚಿವರು ನೀಡಿದ್ದಾರೆ.  ಅವರ ಧೋರಣೆಗೆ ಸಜ್ಜನರ ಬೆಂಬಲವಿದೆ.  ಕಾರ್ಯರೂಪಕ್ಕೆ ತರಲಿ.

 

25.05.2021     

ಮಂಗಳವಾರ

                                                                                                                  ವಿದ್ವಾನ್ ಗಂಗಾಧರ ಭಟ್ಟ, ಅಗ್ಗೆರೆ

(ಶ್ರೀಯುತರು ನಮ್ಮ ವಿದ್ಯಾಗುರುಗಳು, ಧೀಮಂತರು, ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿದ ಸಹೃದಯ ವಿದ್ವಾಂಸರು. ಮಾನ್ಯ ಕಂದಾಯ ಮಂತ್ರಿಗಳ ಮಾತನ್ನು ಕೇಳಿ, ಕೂಡಲೇ ತಮ್ಮ ಮೆಚ್ಚುಗೆಯನ್ನು ಈ ಮೂಲಕ ತಿಳಿಯ ಪಡಿಸಿದ್ದಾರೆ. ಅವರ ಒಪ್ಪಿಗೆಯ ಮೇರೆಗೆ ಈ ಮೇಲಿನ ಅಂಶಗಳನ್ನು ನಾನು ಪ್ರಕಟ ಪಡಿಸಿರುತ್ತೇನೆ. ಪರಮೇಶ್ವರ ಪುಟ್ಟನ್ಮನೆ)