Thursday, January 12, 2012

’ತಂತ್ರ’

Pashya
ತಂತ್ರಕರ್ಮಕಾಂಡವೂ ಅಲ್ಲ. ಬರಿಯ ಜ್ಞಾನ ಕಾಂಡವೂ ಅಲ್ಲ. ಅದು ಇವೆರಡರ ಅರ್ಥಪೂರ್ಣ ಸಮನ್ವಯದಿಂದ ಹುಟ್ಟಿಕೊಂಡ ಉಪಾಸನಾಕಾಂಡ. ನಮಗೆ ಬೇಕಾದುದನ್ನು ಪರೋಕ್ಷ ಶಕ್ತಿಗಳ ನೆರವಿನಿಂದ ಪಡೆದುಕೊಳ್ಳಬಹುದು, ಪಡೆದುಕೊಳ್ಳಬೇಕೆನ್ನುವ ಕರ್ಮಕಾಂಡವು, ಪ್ರತ್ಯಕ್ಷ-ಪರೋಕ್ಷಗಳಿಗೆ ಕೊಡು-ಕೊಳೆಸಂಬಂಧವಲ್ಲದೆ ಅದಕ್ಕಿಂತ ಬೇರೆಯಾದ ಸಂಬಂಧವನ್ನು ಬಗೆಯಲು ಅಶಕ್ತವಾಗಿದೆ. ತಂತ್ರವಾದರೋ ಈ ಕೊಡು-ಕೊಳ್ಳು ಸಂಬಂಧವನ್ನೊಪ್ಪಿಯೂ ಪರೋಕ್ಷ ಶಕ್ತಿಗಳ ಜತೆ ಬೇರೆಯೇ ಆದ ಸಂಬಂಧವನ್ನು ಕಂಡರಿಸುತ್ತದೆ ಮತ್ತು ಆ ಪರೋಕ್ಷ ಶಕ್ತಿಗಳು ನಮ್ಮಿಂದ ಬೇರೆಯಲ್ಲ ಎಂಬಷ್ಟು ದೂರ ತಂತ್ರನಮ್ಮನ್ನು ಒಯ್ಯುತ್ತದೆ. ಹಾಗೆಯೇ ನಮ್ಮ ಪ್ರಜ್ಞೆಯನ್ನು (ಸಂವಿತ್) ಎಲ್ಲ ಉಪಾಧಿಗಳಿಂದ- ಎಲ್ಲ ಬಗೆಯConditioningಗಳಿಂದ- ಬಿಡುಗಡೆಗೊಳಿಸಬೇಕೆನ್ನುವ ಜ್ಞಾನಕಾಂಡದ ಆದರ್ಶವನ್ನು ಒಪ್ಪಿಯೂ. ತಂತ್ರವು ಈ ಬಿಡುಗಡೆಯನ್ನು ಸೃಷ್ಟಿ ಮುಖದಿಂದ ಸಾಧಿಸಬಹುದೆನ್ನುತ್ತದೆ. ಹೀಗೆ ತಂತ್ರಕ್ಕೆ ಯಾವುದೂ ಹೊರತಲ್ಲ.
 
ತಂತ್ರಪದಕ್ಕಿರುವ ಅನೇಕ ಅರ್ಥಗಳಲ್ಲಿ- ವಿಸ್ತಾರಗೊಳ್ಳುವಿಕೆ, ಹಬ್ಬುವಿಕೆ, ವಿಶದಗೊಳ್ಳುವಿಕೆ ಎನ್ನುವುದು ಮುಖ್ಯವಾದ ಅರ್ಥವಾಗಿದೆ ಎನ್ನುವುದನ್ನು ಗಮನಿಸಬೇಕು. ಮತ್ತು ವಿಸ್ತಾರ, ವೈವಿಧ್ಯ, ಬಹು-ರೂಪತೆ ಎನ್ನುವುದು ಸೃಷ್ಟಿಯ ಧರ್ಮ ಎನ್ನುವುದನ್ನು ಲಕ್ಷಿಸಬೇಕು. ಈ ಸೃಷ್ಟಿಯ ಮೂಲದಲ್ಲಿರುವುದು ತಾನು ಬಹುವಾಗಬೇಕೆಂಬ ಒಂದು ಸಂಕಲ್ಪಎನ್ನುವ ಉಪನಿಷತ್ತಿನ ಹೊಳಹನ್ನು ತಂತ್ರತನ್ನೆದೆಯಲ್ಲಿ ಹೊತ್ತುಕೊಂಡಿದೆ. ವಿಸ್ತಾರವಾಗುವುದೆಂದಾಗ ವಿರೋಧಗಳನ್ನು ತಡೆಗಳನ್ನು ಮೀರುತ್ತ ಹೋಗುವುದು ಮತ್ತು ವಿರೋಧಗಳನ್ನು ಮೀರುವುದೆಂದರೆ ಯಾವುದನ್ನು ವಿರೋಧಗಳೆಂದು ಬಗೆದಿರುವೆವೋ ಅವು ನಿಜಕ್ಕೂ ವಿರೋಧಗಳಲ್ಲ ಎಂಬ ಕಾಣ್ಕೆಯ ಅವಸ್ಥೆಯನ್ನು ಮುಟ್ಟುವುದು ಎಂದೇ ಅರ್ಥವಾಗುತ್ತದೆ. ಈ ಕಾಣ್ಕೆಗೆ ಅನುಗುಣವಾಗಿಯೇ ಭೋಗಮತ್ತು ಮೋಕ್ಷಗಳು ಪರಸ್ಪರ ವಿರುದ್ಧ ಸ್ಥಿತಿಗಳೆಂದು ತಂತ್ರಬಗೆಯುವುದಿಲ್ಲ. ಇವು ವಿರುದ್ಧ ಸ್ಥಿತಿಗಳೆಂದು, ಒಂದಿದ್ದರೆ ಇನ್ನೊಂದಿಲ್ಲವೆಂದು ತಿಳಿಯುವ ಶ್ರದ್ಧೆಗಳೇ ಇರುವಾಗ ತಂತ್ರದ ಈ ನಿಲುವು ಕ್ರಾಂತಿಕಾರಕವಾದ ಹೊಸ ಕಾಣ್ಕೆಯಾಗಿದೆ. ಶ್ರೀ ಸುಂದರೀ ಸೇವನ ತತ್ಪರಾಣಾಂ ಭುಕ್ತಿಶ್ಚ ಮುಕ್ತಿಶ್ಚ ಕರಸ್ಥ ಏವ ಶ್ರೀ ವಿದ್ಯೆಯ ಉಪಾಸಕನಿಗೆ ಭುಕ್ತಿ ಮುಕ್ತಿಗಳೆರಡೂ ಅಂಗೈಯಲ್ಲಿ ನೆಲಸಿವೆ- ಎನ್ನುವುದು ತಂತ್ರದ ಮಾತು, ಭರವಸೆ ಮತ್ತು ಕಾಣ್ಕೆ. ಈ ಕಾಣ್ಕೆಯೇ ಉಪಾಸನಾಕಾಂಡದ ನೆಲೆ.  ಇದೇ ವ್ಯಾಸ ಮತ್ತು ನಮ್ಮ ನಾರಣಪ್ಪ ಚಿತ್ರಿಸಿದ ಕೃಷ್ಣನ ವ್ಯಕ್ತಿತ್ವದ ನೆಲೆ. ಇದೇ ನಮ್ಮ ರತ್ನಾಕರವರ್ಣಿ ಚಿತ್ರಿಸಿದ ಭರತನ ನೆಲೆ. ಭೋಗ-ಯೋಗಗಳಲ್ಲಿ ಒಂದನ್ನು ಬಿಟ್ಟು ಇನ್ನೊಂದಿದೆ ಎಂಬ ತಿಳುವಳಿಕೆಯಲ್ಲಿಯೇ ಏನೋ ಒಂದು ಅರಕೆ ಇದೆ ಎಂದು ತಂತ್ರಭಾವಿಸುತ್ತದೆ. ಬದುಕನ್ನು ಹಾಗೆ ನೋಡಲು ಸಾಧ್ಯವಾಗುವುದಾದರೆ, ಬದುಕೆನ್ನುವುದು ಅಭಂಗ; ಅಖಂಡ ವಸ್ತುವಾಗಿದೆ. ಆದುದರಿಂದಲೇ ಇಂಥ ಬದುಕನ್ನು ಸತ್ಎಂದು ಇರುವಿಕೆಎಂದು ಉಪನಿಷತ್ತು ಗ್ರಹಿಸಿತು.  ಇಂಥ ಬದುಕಿನಿಂದಲೇ ಹುಟ್ಟಿಕೊಂಡ ಅರಿವುಕೂಡಾ ಅಭಂಗ ಎಂದು ಅರಿವನ್ನು ಚಿತ್ಎಂದು ಗ್ರಹಿಸಿತು. ಈ ಹಿನ್ನೆಲೆಯಲ್ಲಿಯೇ ಯಾವ ಅನುಭವವನ್ನೂ ಭಂಗಗೊಳಿಸದೆ ಬದುಕಿನ ಅಭಂಗ ಅರಿವನ್ನು ಪಡೆಯುವ ಸವಾಲನ್ನು ತಂತ್ರ;’ ಸ್ವೀಕರಿಸಿ ಅದಕ್ಕೆ ಸಜ್ಜುಗೊಂಡಿತು.
ಸೃಷ್ಟಿಎಂದರೆ ವಿಸ್ತಾರವಲ್ಲವೆ? ’ತಂತ್ರವೆಂದರೂ ವಿಸ್ತಾರ. ಎರಡೆನ್ನುವುದು ಒಂದರ ವಿಸ್ತಾರ.  ಆದುದರಿಂದಲೇ ಎರಡಿಲ್ಲದೆ ಸೃಷ್ಟಿ ಇಲ್ಲ. ಆ ಎರಡು ಪರಸ್ಪರ ಗಾಢವಾಗಿ ಬೆರೆಯಬಲ್ಲ ಎರಡು.  ಬೆರೆಯುವುದಕ್ಕಾಗಿಯೇ ಎರಡಾದಂತಿರುವ ಎರಡು. ಬೆರೆಯುವುದೆಂದರೆ ತಾದಾತ್ಮ್ಯ. ಒಂದು ಇನ್ನೊಂದಾಗಿ ಪರಿಣಾಮಗೊಳ್ಳುವ ರಸ-ಶಕ್ತಿ! ತಾದಾತ್ಮ್ಯಗೊಳ್ಳದೆ ಸೃಷ್ಟಿಶೀಲತೆ ಇಲ್ಲ. ಸೃಷ್ಟಿಶೀಲತೆ ಇಲ್ಲದೆ ಸೃಷ್ಟಿಯೇ ಇಲ್ಲ.

ಆದುದರಿಂದಲೇ ಇಲ್ಲಿ, ಉಪಾಸನೆಯಲ್ಲಿ, ನಾವು ಸಾಧಿಸಬೇಕಾದುದು ಈ ಸೃಷ್ಟಿಶೀಲ ತಾದಾತ್ಮ್ಯವನ್ನೇ. ಸೋಜಿಗವೆಂದರೆ, ಈ ತಾದಾತ್ಮ್ಯ ಈಗಾಗಲೇ ಇದೆ! ಈ ಸೃಷ್ಟಿ ಇದೆ ಎಂದು ನಂಬುವೆವಾದರೆ, ಈ ತಾದಾತ್ಮ್ಯವನ್ನು ಅದು ಈಗಾಗಲೇ ಇದೆ ಎಂದು ನಂಬಿದಂತೆಯೇ. ಈ ನಂಬಿಕೆಯನ್ನು ಅನುಭವ ಮಾಡಿಕೊಳ್ಳುವುದೇ- ಭವವನ್ನು ಅಂದರೆ ಸೃಷ್ಟಿಯನ್ನು ಅನು-ಭವಮಾಡಿಕೊಳ್ಳುವುದೇ-ಅಂದರೆ, ದೇಹ; ಮನಸ್ಸು ಮತ್ತು ಅಂತಃಕರಣಗಳಲ್ಲಿ ನೇರವಾಗಿ ಅನು-ಭವಿಸುವುದೇ ಉಪಾಸನೆಯ ಗುರಿಯಾಗಿದೆ ಎನ್ನಬಹುದು.

ಕೆಲವು ತಂತ್ರಗಳು ಶಿವಪ್ರಧಾನ. ಉದಾ: ಕಾಶ್ಮೀರ ಶೈವ.  ಕೆಲವು ತಂತ್ರಗಳು ಶಕ್ತಿಪ್ರಧಾನ.ಉದಾ: ಶೌಕ್ತ ಕೌಲ.


ತೋಳ್ಪಾಡಿ ಸೌಂದರ್ಯ ಲಹರಿ<<<<<-papu!

No comments:

Post a Comment