Wednesday, August 17, 2022

ಅಭಿಜ್ಞಾನ ಶಾಕುಂತಲ ಕಥೆ ಮತ್ತು ವಿಮರ್ಶೆ

ಕವಿಕುಲಗುರುಎಂದು ಪ್ರಖ್ಯಾತನಾದ ಕಾಳಿದಾಸನು ಸಂಸ್ಕೃತದಲ್ಲಿ ಬರೆದ ಏಳು ಅಂಕಗಳ ನಾಟಕ ಅಭಿಜ್ಞಾನ ಶಾಕುಂತಲಮ್. ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಕಾಳಿದಾಸನೂ ಒಬ್ಬನೆನ್ನುವ ಸ್ಥಾನವನ್ನು ಗಳಿಸಿಕೊಟ್ಟ ನಾಟಕ. "ಕಾವ್ಯೇಷು ನಾಟಕಂ ರಮ್ಯಂ; ತತ್ರ ರಮ್ಯಾ ಶಾಕುಂತಲಾ" ಎಂದು ಹೊಗಳಿಸಿಕೊಂಡ ಶೃಂಗಾರರಸ ಪ್ರಧಾನವಾಗಿರುವ ಕೃತಿ. ಇದರ ಕಥಾವಸ್ತು ಕವಿಯ ಕಲ್ಪನೆಯಲ್ಲ; ವ್ಯಾಸನಿಂದ ರಚಿತವಾದ ಮಹಾಭಾರತದಲ್ಲಿ ಇದರ ಉಲ್ಲೇಖವಿದೆ.



ದುಷ್ಯಂತನು ಚಂದ್ರವಂಶದಲ್ಲಿ ಪ್ರಸಿದ್ಧನಾದ ದೊರೆ. ಇವನಿಗೆ ತಂದೆ ಈಲಿನ. ನಾಲ್ವರು ಸಹೋದರರು - ಶೂರ, ಭೀಮ, ವಸು, ಪ್ರವಸು ಎಂದು, ಮೊದಲ ಹೆಂಡತಿ ಲಕ್ಷ್ಮೀ. ಆಕೆಯಲ್ಲಿ ಹುಟ್ಟಿದ ಮಗ ಜನಮೇಜಯ. ಎರಡನೆಯ ಹೆಂಡತಿ ಶಕುಂತಲೆ. ಇವಳು ವಿಶ್ವಾಮಿತ್ರ ಮೇನಕೆಯರ ಮಗಳು. ಕಣ್ವಾಶ್ರಮದಲ್ಲೇ ಬೆಳೆದ ಈಕೆಯನ್ನು ಬೇಟೆಗೆ ಹೋದ ದುಷ್ಯಂತ ಕಂಡು ಮೋಹಿತನಾಗಿ ಗಾಂಧರ್ವ ರೀತಿಯಲ್ಲಿ ಈಕೆಯನ್ನು ವಿವಾಹವಾಗುತ್ತಾನೆ. ಕೆಲಕಾಲ ಜೊತೆಗಿದ್ದು ತಾನೊಬ್ಬನೇ ರಾಜಧಾನಿಗೆ ಹಿಂತಿರುಗುತ್ತಾನೆ. ಗರ್ಭವತಿ ಶಕುಂತಲೆ ಆಶ್ರಮದಲ್ಲಿದ್ದುಕೊಂಡು ಗಂಡು ಮಗುವನ್ನು ಪ್ರಸವಿಸುತ್ತಾಳೆ. ಕಣ್ವರು ಮಗುವಿಗೆ ಸರ್ವದಮನ ಎಂದು ನಾಮಕರಣ ಮಾಡುತ್ತಾರೆ. ದುಷ್ಯಂತ ಮತ್ತೆ ಕಣ್ವಾಶ್ರಮಕ್ಕೆ ಬರುವುದೂ ಇಲ್ಲ; ಹೆಂಡತಿಯನ್ನು ಕರೆಸಿಕೊಳ್ಳುವುದೂ ಇಲ್ಲ! ಆಗ ಕಣ್ವರು ಶಕುಂತಲೆಯನ್ನೂ ಸರ್ವದಮನನನ್ನೂ ಗಂಡನ ಮನೆಗೆ ಕಳುಹಿಸಿ ಕೊಡುತ್ತಾರೆ. ದುಷ್ಯಂತ ಶಕುಂತಲೆಯನ್ನು ಮರೆತು ಬಿಟ್ಟಿದ್ದನಾದ ಕಾರಣ ತಾನು ಆತನ ಪತ್ನಿ ಎಂಬುದನ್ನು ಹೇಗೆ ಸ್ಪಷ್ಟಪಡಿಸಿದರೂ ಆಕೆಯನ್ನು ಅವನು ಗುರುತಿಸಲಾರ-ದಾಗುತ್ತಾನೆ. ಆ ಸಮಯದಲ್ಲಿ ಅಶರೀರವಾಣಿಯೊಂದು ಶಕುಂತಲೆ ಆತನ ಪತ್ನೀ ಎಂದೂ ಸರ್ವದಮನ ಆತನ ಮಗನೆಂದೂ ಅವರಿಬ್ಬರನ್ನೂ ಸ್ವೀಕರಿಸಬೇಕೆಂದೂ ನುಡಿಯುತ್ತದೆ. ಆಗ ದುಷ್ಯಂತ ಮರುಮಾತಾಡದೆ ಸ್ವೀಕರಿಸುತ್ತಾನೆ. ಆಗಲೆ ಮಗನಿಗೆ ಭರತ ಎಂದು ಹೊಸದಾಗಿ ಹೆಸರಿಡುತ್ತಾನೆ. ಮಹಾಭಾರತದ ಆದಿಪರ್ವದಲ್ಲಿ ಬರುವ ದುಷ್ಯಂತೋಪಾಖ್ಯಾನವೆಂಬ ಈ ಕತೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಕಾಳಿದಾಸ ಬಳಸಿಕೊಂಡು ತನ್ನ ವಿಶ್ವವಿಖ್ಯಾತ ಅಭಿಜ್ಞಾನ ಶಾಕುಂತಲಾ ಎಂಬ ನಾಟಕವನ್ನು ಬರೆದಿದ್ದಾನೆ.

ಪದ್ಮಪುರಾಣದ ಮಾತೃಕೆಗಳಲ್ಲಿ ಶಾಕುಂತಲೋಪಾಖ್ಯಾನದ ಬೇರೊಂದು ಪಾಠ ದೊರೆಯುತ್ತದೆ. ಇದರ ಕಥೆಗೂ ಕಾಳಿದಾಸನ ನಾಟಕಕ್ಕೂ ತುಂಬ ಸಾಮ್ಯ ಉದ್ದಕ್ಕೂ ಕಾಣಬರುತ್ತದೆ. ಅವುಗಳಲ್ಲಿ ಬಹು ಮುಖ್ಯವಾದದ್ದು ದುರ್ವಾಸರ ಶಾಪ. ಇದರ ಫಲವಾಗಿಯೇ ಶಕುಂತಲೆಯ ನಿರಾಕರಣೆ. ಬೆಸ್ತನಿಂದಲೇ ಉಂಗುರ ದೊರೆಯುತ್ತದೆ. ಮಾರೀಚಾಶ್ರಮದಲ್ಲೇ, ಭರತನ ಮೂಲಕವೇ ದಂಪತಿಗಳ ಸಮಾಗಮ. ಹೀಗೆ ಈ ಕತೆಯೇ ಕಾಳಿದಾಸನಿಗೆ ಮೂಲವಸ್ತುವಾಗಿರಬೇಕೆಂದು ಕೆಲವರು ಅಭಿಪ್ರಾಯಪಡುತ್ತಾರೆ.



ನಾಟಕ ರಚನೆಯ ಕಾಲದ ಬಗ್ಗೆ ನೋಡಿದರೆ, ಕಾಳಿದಾಸನಿದ್ದ ಕಾಲವನ್ನು ಕುರಿತು ಇನ್ನೂ ಅನಿರ್ದಿಷ್ಟತೆಯಿರುವಾಗ ಈ ನಾಟಕವನ್ನು ಯಾವಾಗ ಬರೆದನೆಂದು ಹೇಳುವುದು ತುಂಬಾ ಕಷ್ಟ. ಈ ನಾಟಕವನ್ನು ಬರೆಯುವ ವೇಳೆಗೆ ಕವಿಗೆ ತನ್ನ ಶಕ್ತಿಯಲ್ಲಿ ಅಪಾರ ಆತ್ಮವಿಶ್ವಾಸವಿದ್ದು, ತನ್ನ ಬದುಕು ಧನ್ಯವಾಯಿತೆಂಬ ಭಾವನೆ ಮೂಡಿದೆ. ಇದರ ಫಲವಾಗಿ ಈ ಭವದಿಂದ ನನಗೆ ಬಿಡುಗಡೆಯಾಗಲಿ; ಮರುಹುಟ್ಟನು ನನಗೆ ಆ ಮಹೇಶನು ಕರುಣಿಸದಿರಲಿ, ಎಂದು ಪ್ರಾರ್ಥಿಸುತ್ತಾ ನಾಟಕವನ್ನು ಕವಿಯು ಮುಗಿಸುತ್ತಾನೆ. ಬದುಕಿನಲ್ಲಿ ಕೃತಕೃತ್ಯನಾದವನು ಆಡುವ ಭರತವಾಕ್ಯವಿದು, ಎನ್ನುತ್ತಾರೆ ವಿಮರ್ಶಕರು. ಆದ್ದರಿಂದ ಅಭಿಜ್ಞಾನ ಶಾಕುಂತಲಕಾಳಿದಾಸನ ಕೊನೆಯ ಕೃತಿಯೆಂದು ಅಭಿಪ್ರಾಯ ಪಡುತ್ತಾರೆ.

No comments:

Post a Comment