Wednesday, August 17, 2022

ಪುರಾಣಗಳು

ಸಂಸ್ಕೃತದ ಧಾರ್ಮಿಕ ವಾಙ್ಮಯದಲ್ಲಿನ ಒಂದು ಪ್ರಮುಖ ಭಾಗವನ್ನು ಈ ಹೆಸರಿನಿಂದ ಕರೆಯುತ್ತಾರೆ. ಪುರಾಣವೆಂದರೆ ಪುರಾತನವಾದುದು ಎಂಬ ಅರ್ಥ ಇದೆಯಾದರೂ ಹೊಸ ಕಳೆ ಇರುವ ಹಳೆಯ ನಿರೂಪಣೆ “ಪುರಾಪಿ ನವಂ” ಎಂದು ಇದಕ್ಕೆ ಅರ್ಥೈಸಲಾಗಿದೆ. ಪುರಾಣಗಳಿಗೆ ಸಂಪ್ರದಾಯದಲ್ಲಿ ಪಂಚಲಕ್ಷಣಗಳನ್ನು ಹೇಳುತ್ತಾರೆ. ಸರ್ಗ - ಜಗತ್ತಿನ ಹುಟ್ಟು, ಪ್ರತಿಸರ್ಗ - ಅವನತಿ, ಸಾವು, ವಂಶ - ಋಷಿ, ದೇವತೆಗಳ ಜೀವಿತ ವಿವರ, ಮನ್ವಂತರಗಳು - ಸೂರ್ಯಚಂದ್ರವಂಶೀಯ ರಾಜರ ಚರಿತ್ರೆಗಳು. ಇವೇ ಆ ಐದು ಲಕ್ಷಣಗಳು. ಎಂದರೆ ಪುರಾಣದಲ್ಲಿ ವಿವರಣೆಗೆ ನಿರೂಪಣೆಗೆ ಬರುವ ವಿವರಗಳ ವ್ಯಾಪ್ತಿ ದೊಡ್ಡದು. ವೇದೋಪನಿಷತ್ತುಗಳಲ್ಲಿ ಬರುವ ಗಹನತತ್ತ್ವಗಳನ್ನು ಕಥೆಗಳ ಮೂಲಕ ಪಾಮರಗ್ರಾಹ್ಯವಾಗಿ ಹೇಳುವುದು ಪುರಾಣದ ಪ್ರಮುಖ ಪ್ರಯೋಜನವಾದರೂ ಭಾರತದ ಪ್ರಾಚೀನ ಯುಗದ ಇತಿಹಾಸವನ್ನು ಪುನಃ ನಿರ್ಮಿಸಲು ಪುರಾಣ ತುಂಬಾ ನೆರವಾಗಿದೆ. ಇದು ಸಾಹಿತ್ಯ ರಾಶಿಯಲ್ಲಿ ಶತಕೋಟಿ ಪ್ರವಿಸ್ತರವಾದದ್ದಾದರೂ ಇದನ್ನು ಆಯ್ದು ಅಷ್ಟಾದಶ ಮಹಾಪುರಾಣಗಳನ್ನು ಹೇಳುತ್ತಾರೆ. ಬ್ರಹ್ಮ, ಪದ್ಮ, ವಿಷ್ಣು, ಶಿವ, ವಾಯು, ಭಾಗವತ, ನಾರದ, ಅಗ್ನಿ, ಭವಿಷ್ಯತ್, ಬ್ರಹ್ಮವೈವರ್ತ, ಲಿಂಗ, ಸ್ಕಾಂದ, ವಾರಾಹ, ವಾಮನ, ಕೂರ್ಮ, ಮತ್ಸ್ಯ, ಗರುಡ, ಬ್ರಹ್ಮಾಂಡ ಪುರಾಣಗಳೆಂಬುದಾಗಿ. ಈಗ ಅವುಗಳನ್ನು ಒಂದೊಂದಾಗಿ ಅತೀ ಸಂಕ್ಷೇಪದಲ್ಲಿ ನೋಡೋಣ.



1) ಬ್ರಹ್ಮ ಪುರಾಣ: ಇದಕ್ಕೆ ಆದಿ ಪುರಾಣ ಎಂಬ ಹೆಸರೂ ಇದೆ.

2) ಪದ್ಮ ಪುರಾಣ: ವಿಷ್ಣುವನ್ನು ಕೇಂದ್ರವಾಗಿಸಿ ಬ್ರಹ್ಮಾಂಡದ ವಿವರಣೆ ನೀಡಲಾಗಿದೆ.

3) ವಿಷ್ಣುಪುರಾಣ: ಮಹಾವಿಷ್ಣುವಿನ ಬಗ್ಗೆ, ಪರಮಾತ್ಮ ಮಹಾವಿಷ್ಣು ಬಗ್ಗೆ ವಿವರವಾಗಿ ಇದೆ.

4) ಶಿವ ಪುರಾಣ: ಶೈವದ ಬಗ್ಗೆ ತಿಳಿಸುತ್ತದೆ. ಶಿವನಿಂದ ವಿಷ್ಣು, ಬ್ರಹ್ಮ ಬಂದಿದ್ದಾಗಿ ಹೇಳುತ್ತದೆ.

5) ಭಾಗವತ ಪುರಾಣ: ಅತ್ಯಧಿಕ ಜಾನಾದರಣೆ ಪಡೆದ ಪುರಾಣ. ವಿಷ್ಣುವಿನ ಅವತಾರಗಳನ್ನೇ ವಿವರಿಸುತ್ತದೆ.

6) ನಾರದ ಪುರಾಣ: ಭಾರತ ದೇಶದಲ್ಲಿ ಇರುವ ಪವಿತ್ರ ನದಿಗಳ ಬಗ್ಗೆ ತಿಳಿಸುತ್ತದೆ. ಗ್ರಹ ತಾರೆಗಳ ಕುರಿತಾದ ವಿಪುಲ ಮಾಹಿತಿಯಿದೆ.

7) ಮಾರ್ಕಂಡೇಯ ಮಹಾಪುರಾಣ: ಶಕ್ತಿತತ್ವವನ್ನು ಎತ್ತಿ ಹೇಳುವ ಪುರಾಣ ಇದು.

8) ಅಗ್ನಿಪುರಾಣ: ರಾಜಕೀಯಗಳು, ವಾಸ್ತುಶಾಸ್ತ್ರ, ಸೈನ್ಯ ಮತ್ತು ವಿಜ್ಞಾನಗಳ ಕುರಿತು ಚಿಂತಿಸಿದೆ.

9) ಬ್ರಹ್ಮಾಂಡ ಪುರಾಣ: ನ್ಯಾಯ, ಸರಕಾರಗಳು, ರಾಜಕೀಯ ಇಂತಹ ಅಂಶಗಳು ವರ್ಣಿತವಾಗಿವೆ.

10) ಮತ್ಸ್ಯ ಪುರಾಣ: ಮತ್ಸ್ಯ ಅವತಾರದ ಬಗ್ಗೆ ಹೇಳುತ್ತದೆ.

11) ಬ್ರಹ್ಮ ವೈವರ್ತ ಪುರಾಣ: ದೇವ, ದೇವತೆಗಳ ಪ್ರೇಮ ಕಥೆಗಳೇ ಇಲ್ಲಿಯ ಪ್ರಧಾನ ಅಂಶ.

12) ವಾಮನ ಪುರಾಣ: ಇದು ವಿಷ್ಣುವಿನ ಅವತಾರ ವರ್ಣನೆಯೇ ಆಗಿದೆ.

13) ಲಿಂಗ ಪುರಾಣ: ಶಿವನ ಲಿಂಗವನ್ನೇ ಸೃಷ್ಟಿಗೆ ಮೂಲವಾಗಿ ವರ್ಣಿಸಿದೆ.

14) ವರಾಹ ಪುರಾಣ: ನಾರಾಯಣನ ವರಾಹ ಅವತಾರದ ಕಥೆಯಿದು.

15) ವಾಯು: ಅತಿ ಪ್ರಾಚೀನವಾದ ಪುರಾಣಗಳಲ್ಲಿ ಒಂದು. ದಕ್ಷಿಣ ಭಾರತದ ವರ್ಣನೆ ಇಲ್ಲಿದೆ.

16) ಸ್ಕಂದ ಪುರಾಣ: ಶಿವನ ಮಗ ಕಾರ್ತಿಕೇಯನ ಬಗ್ಗೆ ಹೆಚ್ಚಾಗಿ ತಿಳಿಸಿದ್ದಾರೆ. ಮತ್ತು ಪವಿತ್ರ ಸ್ಥಳಗಳ ಬಗ್ಗೆ ಇಲ್ಲಿ ವಿಪುಲ ಸಾಮಗ್ರಿಗಳಿವೆ.

17) ಕೂರ್ಮ ಪುರಾಣ: ನಾರಾಯಣನ ಕೂರ್ಮ ಅವತಾರದ ಬಗ್ಗೆ ಇದರಲ್ಲಿ ಕಥೆ ಇದೆ.

18) ಗರುಡ ಪುರಾಣ: ಸ್ವರ್ಗ, ನರಕ, ಜನ್ಮ ಪುನರ್ಜನ್ಮ, ಪಾಪಗಳು, ಪುಣ್ಯಗಳು, ಶಿಕ್ಷೆಗಳು ಹೀಗೆ ನೀತಿ, ವಿವೇಕ ಮತ್ತು ವಿಜ್ಞಾನಗಳಿಂದ ಕೂಡಿದ ಒಂದು ವಿಶ್ವ ಕೋಶವೇ ಇದು.

ಒಟ್ಟಿನಲ್ಲಿ ಭಾರತೀಯರಿಗೆ ಇತಿಹಾಸದ ದೃಷ್ಟಿಯಿಲ್ಲವೆಂಬ ಅಪವಾದವಿದೆ. ಇಂದಿಗೂ ಇದು ಅಸ್ಪಷ್ಟವಾಗಿಯೇ ಉಳಿದಿದೆ. ಈ ಅಸ್ಪಷ್ಟತೆಯನ್ನು ಪರಿಹರಿಸಲು ಪುರಾಣಗಳು ನೆರವಾಗುತ್ತವೆ.

No comments:

Post a Comment